ನವದೆಹಲಿ: ಮೊದಲು 'ಜೀವವಿದ್ದರೆ ಜಗತ್ತು' ಎಂಬುದು ನಮ್ಮ ಮಂತ್ರವಾಗಿತ್ತು, ಆದರೆ ಈಗ ಜೀವ-ಜೀವನೋಪಾಯ ಎರಡೂ ನಮ್ಮ ಮಂತ್ರವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ದೇಶಾದ್ಯಂತ ಮಾರಕ ಕೊರೋನಾ ವೈರಸ್ ಸೋಂಕು ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಪ್ರಸ್ತುತ ಹೇರಲಾಗಿರುವ ಲಾಕ್ ಡೌನ್ ಅವಧಿಯನ್ನು ಏಪ್ರಿಲ್ 30ರವರೆಗೂ ವಿಸ್ತರಿಸಲಾಗಿದೆ. ಈ ಕುರಿತು ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚೆ ನಡೆಸಿದ್ದರು. ಈ ವೇಳೆ ಕರ್ನಾಟಕ ಸಿಎಂ ಬಿಎಸ್ ಯಡಿಯೂರಪ್ಪ ಸೇರಿದಂತೆ ಎಲ್ಲ ರಾಜ್ಯಗಳ ಸಿಎಂಗಳೂ ಲಾಕ್ ಡೌನ್ ಮುಂದುವರೆಸುವ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಸಭೆ ವೇಳೆ ಮಾತನಾಡಿದ್ದ ಪ್ರಧಾನಿ ಮೋದಿ, ಆರೋಗ್ಯ ಹಾಗೂ ದೇಶದ ಏಳಿಗೆ ಕಡೆಗೆ ಗಮನ ಹರಿಸುವಂತೆ ಎಲ್ಲ ರಾಜ್ಯಗಳಿಗೆ ಮನವಿ ಮಾಡಿದ್ದಾರೆ. ಅಂತೆಯೇ ಜೀವ ಹಾಗೂ ಜೀವನೋಪಾಯ (ಜಾನ್ ಭಿ, ಜಹಾನ್ ಭಿ) ಎರಡರ ಕಡೆಗೂ ಗಮನ ಹರಿಸುವಂತೆ ಎಲ್ಲ ರಾಜ್ಯದ ಮುಖ್ಯಮಂತ್ರಿಗಳಿಗೆ ತಿಳಿಸಿರುವ ಪ್ರಧಾನಿ, 'ಭಾರತದ ಉಜ್ವಲ ಭವಿಷ್ಯ, ಏಳಿಗೆ ಹಾಗೂ ಆರೋಗ್ಯ ಭಾರತಕ್ಕಾಗಿ ಎರಡೂ ಅವಶ್ಯಕ' ಎಂದಿದ್ದಾರೆ.
'ಲಾಕ್ಡೌನ್ ಘೋಷಿಸುವಾಗ, ಜೀವವಿದ್ದರೆ ಜಗತ್ತೂ ಇರುತ್ತದೆ ಎಂದಿದ್ದೆ. ಬಹುತೇಕ ಜನರು ಅದನ್ನು ಅರ್ಥ ಮಾಡಿಕೊಂಡು ಮನೆಯಲ್ಲಿಯೇ ಇರುವ ಮೂಲಕ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ಜೀವ ಮತ್ತು ಜಗತ್ತು (ಜೀವನೋಪಾಯ) ಎರಡರ ಬಗೆಗೂ ಗಮನವಿಟ್ಟು ಎಲ್ಲ ಜನರು ತಮ್ಮ ಕರ್ತವ್ಯಗಳನ್ನು ನಿರ್ವಹಿಸಿ, ಸರ್ಕಾರದ ಸೂಚನೆಗಳನ್ನು ಪಾಲಿಸಿದರೆ ಕೊರೋನಾ ವೈರಸ್ ವಿರುದ್ಧ ನಮ್ಮ ಹೋರಾಟಕ್ಕೆ ಮತ್ತಷ್ಟು ಬಲ ಸಿಕ್ಕಂತಾಗುತ್ತದೆ ಎಂದು ಹೇಳಿದರು.
ಇನ್ನು ಲಾಕ್ ಡೌನ್ ಸಂದರ್ಭದಲ್ಲಿ ರೈತರು ಹಾಗೂ ಕೈಗಾರಿಕೆ ವಲಯಗಳ ಚಟುವಟಿಕೆಗಳಿಗಾಗಿ ಕೆಲವು ಸಡಿಲಿಕೆಗಳು ನೀಡುವಂತೆ ಮುಖ್ಯಮಂತ್ರಿಗಳು ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ದೇಶದಾದ್ಯಂತ 21 ದಿನಗಳ ಲಾಕ್ಡೌನ್ ಏಪ್ರಿಲ್ 14ರಂದು ಕೊನೆಯಾಗಲಿದೆ. ಈಗಾಗಲೇ ಒಡಿಶಾ, ಪಂಜಾಬ್, ಮಹಾರಾಷ್ಟ್ರ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳು ಏಪ್ರಿಲ್ 30ರ ವರೆಗೂ ಲಾಕ್ಡೌನ್ ಮುಂದುವರಿಸುವುದಾಗಿ ಘೋಷಿಸಿವೆ. ಸೋಂಕು ಪತ್ತೆಯಾಗದಿರುವ ಪ್ರದೇಶಗಳಲ್ಲಿ ನಿರ್ಬಂಧ ಸಡಿಲಗೊಳಿಸುವುದು ಹಾಗೂ ಆರ್ಥಿಕತೆಗೆ ಚೇತರಿಕೆ ನೀಡುವ ನಿಟ್ಟಿನಲ್ಲಿ ಕೆಲವು ಸಡಿಲಿಕೆಗಳೊಂದಿಗೆ ಲಾಕ್ಡೌನ್ ವಿಸ್ತರಣೆಯಾಗುವ ಸೂಚನೆಗಳು ಕಂಡು ಬಂದಿರುವುದಾಗಿ ವರದಿಯಾಗಿದೆ.
ಇನ್ನು ವಿಡಿಯೊ ಕಾನ್ಫರೆನ್ಸ್ ಬಳಿಕ ಮಾತನಾಡಿರುವ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಏಪ್ರಿಲ್ 14ರ ನಂತರದ ಎರಡು ವಾರಗಳ ಲಾಕ್ಡೌನ್ ಕಳೆದ ಮೂರು ವಾರಗಳಿಗಿಂತ ಭಿನ್ನವಾಗಿರುತ್ತದೆ. ಲಾಕ್ ಡೌನ್ ನಿಶ್ಚಿತವಾಗಿದ್ದು, 15 ದಿನಗಳ ಲಾಕ್ಡೌನ್ಗೆ ಕೇಂದ್ರ ಸರ್ಕಾರ ಕೆಲವೇ ದಿನಗಳಲ್ಲಿ ಮಾರ್ಗಸೂಚಿ ಹೊರಡಿಸಲಿದೆ ಎಂದಿದ್ದಾರೆ.
Advertisement