ನವದೆಹಲಿ: ಬೆಂಗಳೂರು ಹಿಂಸಾಚಾರ, ಗಲಭೆಗಳು ಖಂಡನೀಯ ಮತ್ತು ಸ್ವೀಕಾರಾರ್ಹವಲ್ಲ ಎಂದು ಕಾಂಗ್ರೆಸ್ ಮುಖ್ಯ ವಕ್ತಾರ ರಂದೀಪ್ ಸುರ್ಜೇವಾಲಾ ಹೇಳಿದ್ದಾರೆ.
"ಇದು ಕಾನೂನು ಮತ್ತು ಸುವ್ಯವಸ್ಥೆಯ ವೈಫಲ್ಯ, ಬಿಎಸ್ ಯಡಿಯುರಪ್ಪ ಸರ್ಕಾರ ನಿದ್ರಿಸುತ್ತಿದೆಯೇ ಅಥವಾ ಹಿಂಸಾಚಾರ ಸಂಭವಿಸಲೆಂದು ಕಾಯುತ್ತಿದೆಯೆ?" ಸುರ್ಜೇವಾಲಾ ಟ್ವೀಟ್ನಲ್ಲಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
"ಪೊಲೀಸರು ಸಮಯಕ್ಕೆ ಸರಿಯಾಗಿ ಏಕೆ ಕಾರ್ಯನಿರ್ವಹಿಸಲಿಲ್ಲ? 3 ಸಾವುಗಳಿಗೆ ಯಾರು ಕಾರಣ?" ಅವರು ಪ್ರಶ್ನಿಸಿದ್ದಾರೆ.
ಇನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಉಸ್ತುವಾರಿ ಕೆ ಸಿ ವೇಣುಗೋಪಾಲ್ ಮಾತನಾಡಿ, ಬೆಂಗಳೂರಿನಲ್ಲಿ ಹಿಂಸಾಚಾರವು ದುರದೃಷ್ಟಕರ ಮತ್ತು ಖಂಡನೀಯ. ಅವಹೇಳನಕಾರಿ ಪೋಸ್ಟ್ ಹಿಂದೆ ಇರುವವರು ಮತ್ತು ಗಲಭೆಯಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.
"ಕಾನೂನನ್ನು ಜನ ಕೈಗೆ ತೆಗೆದುಕೊಂಡು ಸಾರ್ವಜನಿಕ ಆಸ್ತಿಯನ್ನು ನಾಶಪಡಿಸುವುದನ್ನು ಸಹಿಸಲಾಗದು ಶಾಂತಿ ಗೆಲ್ಲಲಿ ಕಾನೂನು ಸರಿದಾರಿಯಲ್ಲಿ ಸಾಗಲಿ " ಎಂದು ವೇಣುಗೋಪಾಲ್ ಹೇಳಿದರು.
ಕಾಂಗ್ರೆಸ್ ಶಾಸಕರೊಬ್ಬರ ಸಂಬಂಧಿಯೊಬ್ಬರು ಸಾಮಾಜಿಕ ತಾಣದಲ್ಲಿ ಹಾಕಿದ್ದ ಪೋಸ್ಟ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಗುಂಪು ಮಂಗಳವಾರ ರಾತ್ರಿ ಬೆಂಗಳೂರಿನ ಡಿಜೆ ಹಳ್ಳಿ, ಕೆಜಿ ಹಳ್ಳಿ ಪೋಲೀಸ್ ಠಾಣೆ ಹಾಗೂ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆ ಮೇಲೆ ದಾಳಿ ನಡೆಸಿ ಧ್ವಂಸ ಮಾಡಿತ್ತು.
Advertisement