ನವದೆಹಲಿ: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಚಿಕಿತ್ಸೆಗೆ ನಿನ್ನೆಯಿಂದ ನಿಧಾನವಾಗಿ ಸ್ಪಂದಿಸುತ್ತಿದ್ದು, ಅವರ ಅಂಗಾಂಗಗಳು ಸ್ಥಿರವಾಗಿವೆ ಎಂದು ಅವರ ಪುತ್ರ ಮಾಜಿ ಸಂಸದ ಅಭಿಜಿತ್ ಮುಖರ್ಜಿ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಆಗಸ್ಟ್ 10ರಂದು ತೀವ್ರ ಅನಾರೋಗ್ಯದಿಂದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ದೆಹಲಿಯ ಆರ್ಮಿ ರಿಸರ್ಚ್ ಅಂಡ್ ರೆಫರಲ್ ಹಾಸ್ಪಿಟಲ್ ಗೆ ದಾಖಲಾಗಿದ್ದರು. ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿ ಅದರ ಶಸ್ತ್ರಚಿಕಿತ್ಸೆ ನೆರವೇರಿದೆ. ನಂತರ ಅವರಲ್ಲಿ ಕೊರೋನಾ ಪಾಸಿಟಿವ್ ಕೂಡ ಕಂಡುಬಂದಿತ್ತು. ಅದಕ್ಕೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ನನ್ನ ತಂದೆ ಯಾವಾಗಲೂ ಹೋರಾಟಗಾರ. ಅವರು ಚಿಕಿತ್ಸೆಗೆ ನಿಧಾನವಾಗಿ ಸ್ಪಂದಿಸುತ್ತಿದ್ದಾರೆ. ಅವರ ಅಂಗಾಂಗಗಳೆಲ್ಲವೂ ಸ್ಥಿರವಾಗಿದೆ. ಅವರ ಆರೋಗ್ಯದ ಶೀಘ್ರ ಚೇತರಿಕೆಗೆ ನಾವೆಲ್ಲರೂ ಪ್ರಾರ್ಥಿಸೋಣ, ನಮಗೆ ಅವರ ಅಗತ್ಯವಿದೆ ಎಂದು ಅಭಿಜಿತ್ ಮುಖರ್ಜಿ ನಿನ್ನೆ ಟ್ವೀಟ್ ಮಾಡಿದ್ದಾರೆ.
ಇದಕ್ಕೂ ಮುನ್ನ ನಿನ್ನೆ ಬೆಳಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಮಾಜಿ ರಾಷ್ಟ್ರಪತಿಗಳು ನಿಧನರಾಗಿದ್ದಾರೆ ಎಂಬ ವದಂತಿ ಹಬ್ಬಿತ್ತು. ಇದಕ್ಕೆ ಸ್ಪಷ್ಟನೆ ನೀಡಿದ್ದ ಪುತ್ರ ಅಭಿಜಿತ್ ಮುಖರ್ಜಿ, ನನ್ನ ತಂದೆ ಇನ್ನೂ ಜೀವಂತವಾಗಿದ್ದಾರೆ, ಪತ್ರಕರ್ತರು ಹೀಗೆಲ್ಲಾ ಸುಳ್ಳು ಸುದ್ದಿ ಹಬ್ಬಿಸಬಾರದು, ತಮ್ಮ ಪ್ರಚಾರಕ್ಕೆ ಇಂದು ಹಲವು ಸುದ್ದಿ ಮಾಧ್ಯಮ ಕೇಂದ್ರಗಳು, ಸೋಷಿಯಲ್ ಮೀಡಿಯಾ ಬಳಕೆದಾರರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಕಿಡಿಕಾರಿದ್ದರು.
ಇನ್ನು ಅವರ ಪುತ್ರಿ ಶರ್ಮಿಷ್ಠ ಮುಖರ್ಜಿ ಕೂಡ ಟ್ವೀಟ್ ಮಾಡಿ, ನನ್ನ ತಂದೆಯ ಆರೋಗ್ಯ ಬಗ್ಗೆ ಹಲವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಆಸ್ಪತ್ರೆಯಿಂದ ಸಮಯಕ್ಕೆ ಸರಿಯಾಗಿ ನಾನು ವಿವರಣೆ ಪಡೆಯಬೇಕಿರುವುದರಿಂದ ಮಾಧ್ಯಮಗಳು ಅನಗತ್ಯ ಕರೆ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದರು.
ಪ್ರಣಬ್ ಮುಖರ್ಜಿ 2012ರಿಂದ 2017ರವರೆಗೆ ಭಾರತದ ರಾಷ್ಟ್ರಪತಿಗಳಾಗಿದ್ದರು.
Advertisement