ಮುಂಬೈ: ಮಹಾರಾಷ್ಟ್ರ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ತೀವ್ರ ಹಿನ್ನಡೆ ಅನುಭವಿಸಿದ್ದು, ಶಿವಸೇನಾ ನೇತೃತ್ವದ ಮಹಾ ವಿಕಾಸ ಅಘಾಡಿ(ಎಂವಿಎ)ಯ ಒಗ್ಗಟ್ಟಿನ ಸಾಮರ್ಥ್ಯ ನಿರ್ಣಯಿಸುವಲ್ಲಿ ಪಕ್ಷ ವಿಫಲವಾಗಿದೆ ಎಂದು ಮಹಾರಾಷ್ಟ್ರ ಪ್ರತಿಪಕ್ಷ ನಾಯಕ ದೇವೇಂದ್ರ ಫಡ್ನವಿಸ್ ಅವರು ಶುಕ್ರವಾರ ಹೇಳಿದ್ದಾರೆ.
ಎಂವಿಎ ಅಭ್ಯರ್ಥಿಗಳು ಈವರೆಗೆ ಐದು ಕ್ಷೇತ್ರಗಳಲ್ಲಿ ಮೂರು ಸ್ಥಾನಗಳನ್ನು ಗೆದ್ದಿದ್ದಾರೆ - ಮೂರು ಪದವೀಧರರು ಮತ್ತು ಎರಡು ಶಿಕ್ಷಕ ಕ್ಷೇತ್ರಗಳಿಗೆ ಡಿಸೆಂಬರ್ 1 ರಂದು ಚುನಾವಣೆ ನಡೆದಿತ್ತು.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಫಡ್ನವಿಸ್ ಅವರು, ಪಕ್ಷ ಚುನಾವಣೆ ಫಲಿತಾಂಶದ ಬಗ್ಗೆ ಅವಲೋಕನ ನಡೆಸುತ್ತೆ ಮತ್ತು ಮುಂದಿನ ಚುನಾವಣೆಗೆ ಉತ್ತಮ ರೀತಿಯಲ್ಲಿ ತಯಾರಿ ಮಾಡುತ್ತದೆ ಎಂದಿದ್ದಾರೆ.
"ಈ ಚುನಾವಣೆಯಲ್ಲಿ ಶಿವಸೇನೆ, ಎನ್ಸಿಪಿ ಮತ್ತು ಕಾಂಗ್ರೆಸ್ ಒಟ್ಟು ಸಾಮರ್ಥ್ಯವನ್ನು ನಿರ್ಣಯಿಸಲು ನಮಗೆ ಸಾಧ್ಯವಾಗಲಿಲ್ಲ. ಅವರು ಎಷ್ಟು ದೊಡ್ಡ ಹೋರಾಟವನ್ನು ಒಟ್ಟಾಗಿ ನಡೆಸಬಹುದು ಎಂಬುದು ಈಗ ನಮಗೆ ಅರ್ಥವಾಗಿದೆ. ಮುಂದಿನ ಚುನಾವಣೆಗೆ ನಾವು ಉತ್ತಮವಾಗಿ ತಯಾರಿ ನಡೆಸುತ್ತೇವೆ ಎಂದು ಹೇಳಿದ್ದಾರೆ.
Advertisement