ಕೃಷಿ ಕಾಯ್ದೆ ಪರಿಷ್ಕರಣೆ ಪರವಾಗಿಯೇ ಇದ್ದರಲ್ಲಾ ಈಗ ದ್ವಿಮುಖ ನೀತೀನಾ? ಎಂಬ ಆರೋಪಕ್ಕೆ ಪವಾರ್ ಪ್ರತಿಕ್ರಿಯೆ ಹೀಗಿದೆ...

ಕೇಂದ್ರ ಸರ್ಕಾರ ಕೃಷಿ ಕ್ಷೇತ್ರದಲ್ಲಿ ಜಾರಿಗೆ ತಂದಿರುವ 3 ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆ ಡಿ.09 ರಂದೂ ಮುಂದುವರೆದಿದ್ದು, ರಾಜಕೀಯ ಆರೋಪ ಪ್ರತ್ಯಾರೋಪಗಳೂ ಮುಂದುವರೆದಿವೆ. 
ಎನ್'ಸಿಪಿ ಮುಖ್ಯಸ್ಥ ಶರದ್ ಪವಾರ್
ಎನ್'ಸಿಪಿ ಮುಖ್ಯಸ್ಥ ಶರದ್ ಪವಾರ್

ನವದೆಹಲಿ: ಕೇಂದ್ರ ಸರ್ಕಾರ ಕೃಷಿ ಕ್ಷೇತ್ರದಲ್ಲಿ ಜಾರಿಗೆ ತಂದಿರುವ 3 ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆ ಡಿ.09 ರಂದೂ ಮುಂದುವರೆದಿದ್ದು, ರಾಜಕೀಯ ಆರೋಪ ಪ್ರತ್ಯಾರೋಪಗಳೂ ಮುಂದುವರೆದಿವೆ. 

ಇವು ರೈತ ವಿರೋಧಿ ಕಾನೂನು ಎಂದು ವಿಪಕ್ಷಗಳು ಬೊಬ್ಬೆ ಹಾಕುತ್ತಿದ್ದರೆ, ಅರೆ ನೀವು ಅಧಿಕಾರದಲ್ಲಿದ್ದಾಗ ಇದೇ ಕಾನೂನನ್ನು ಜಾರಿಗೊಳಿಸಲು ಉತ್ಸುಕರಾಗಿದ್ರಿ... ಈಗ ವಿರೋಧ ಮಾಡ್ತಿದ್ದೀರ, ಇದು ಕೇವಲ ವಿರೋಧ ಮಾಡುವುದಕ್ಕೋಸ್ಕರವಾಗಿ ವಿರೋಧಿಸುತ್ತಿರೋದು ಎಂಬುದು ಆಡಳಿತಾರೂಢ ಬಿಜೆಪಿಯ ವಾದ. 

ಈ ಕೃಷಿ ಸುಧಾರಣೆಗಳನ್ನು ವಿರೋಧಿಸಿದ್ದ ಮಾಜಿ ಕೇಂದ್ರ ಕೃಷಿ ಸಚಿವ, ಎನ್ ಸಿಪಿ ಅಧ್ಯಕ್ಷ ಶರದ್ ಪವಾರ್ ಅವರಿಗೂ ಬಿಜೆಪಿ ಇದೇ ವಾದವನ್ನು ಮುಂದಿಟ್ಟು ಪ್ರತ್ಯಾರೋಪ ಮಾಡಿದೆ. 

"ರಾಜ್ಯ ಸರ್ಕಾರಗಳಲ್ಲಿನ ಎಪಿಎಂಸಿ ಕಾಯ್ದೆಯಲ್ಲಿ ಬದಲಾವಣೆಗಳಾಗಬೇಕು, ಕೃಷಿಯಲ್ಲಿ ಖಾಸಗಿ ಹೂಡಿಕೆ ಪ್ರಮುಖ ಪಾತ್ರ ವಹಿಸುವಂತಾಗಬೇಕು" ಎಂಬ ಇರಾದೆಯೊಂದಿಗೆ ಅಂದಿನ ಕೃಷಿ ಸಚಿವರಾಗಿದ್ದ ಶರದ್ ಪವಾರ್ ಅವರು ಮಧ್ಯಪ್ರದೇಶದ ಅಂದಿನ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಹಾಗೂ ದೆಹಲಿ ಸಿಎಂ ಶೀಲಾ ದೀಕ್ಷಿತ್ ಅವರಿಗೆ ಪತ್ರ ಬರೆದಿದ್ದನ್ನು ಬಿಜೆಪಿ ಈಗ ಉಲ್ಲೇಖಿಸಿ, ಪವಾರ್ ಅವರದ್ದು ದ್ವಿಮುಖ ನಿಲುವು ಎಂದು ಟೀಕಿಸಿದೆ.  

ಈ ಆರೋಪಗಳಿಗೆ ಪ್ರತಿಕ್ರಿಯೆ ನೀಡಿರುವ ಶರದ್ ಪವಾರ್, ಅಂದು ನಾನು ಎಪಿಎಂಸಿ ಕಾಯ್ದೆಯಲ್ಲಿ ಸಣ್ಣ ಪ್ರಮಾಣದ ಬದಲಾವಣೆ ತಂದು ಮುಂದುವರೆಸುವಂತೆ ಹೇಳಿದ್ದೆ. ಆದರೆ ಈಗ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕಾನೂನಿನಲ್ಲಿ ಎಪಿಎಂಸಿಯ ಬಗ್ಗೆ ಉಲ್ಲೇಖವೇ ಇಲ್ಲ ಎಂದು ಹೇಳಿದ್ದಾರೆ

ಅಷ್ಟೇ ಅಲ್ಲದೇ ಹಳೆಯ ಪತ್ರಗಳನ್ನಿಟ್ಟುಕೊಂಡು ಬಿಜೆಪಿ ವಿಷಯಾಂತರ ಮಾಡಲು ಯತ್ನಿಸುತ್ತಿದೆ ಎಂದೂ ಶರದ್ ಯಾದವ್ ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com