ಅಮರಾವತಿ: ರಾಜ್ಯಕ್ಕೆ ಮೂರು ರಾಜಧಾನಿಗಳನ್ನು ರಚಿಸುವ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಿ, ಜನರು ಸರ್ಕಾರದ ಪರವಾಗಿದ್ದರೆ ರಾಜಕೀಯ ತೊರೆಯುವುದಾಗಿ ಮಾಜಿ ಮುಖ್ಯಮಂತ್ರಿ ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ವೈ.ಎಸ್. ಜಗನ್ ಮೋಹನ್ ರೆಡ್ಡಿ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.
ರಾಜ್ಯ ರಾಜಧಾನಿಯನ್ನು ಸ್ಥಳಾಂತರಿಸುವ ತಮ್ಮ ನಡೆಯನ್ನು ರಾಜ್ಯದ 6 ಕೋಟಿ ಜನರ ಭಾವನೆಗೆ ಧಕ್ಕೆಯಾಗದಂತೆ ಹಿಂತೆಗೆದುಕೊಳ್ಳುವಂತೆ ಅವರು ಮುಖ್ಯಮಂತ್ರಿಯನ್ನು ಒತ್ತಾಯಿಸಿದ್ದಾರೆ.
ಅಮರಾವತಿಯನ್ನು ರಾಜ್ಯ ರಾಜಧಾನಿಯನ್ನಾಗಿ ಮರುಪಡೆಯಬೇಕು ಎಂದು ಒತ್ತಾಯಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಯ ಮೊದಲ ವಾರ್ಷಿಕೋತ್ಸವ ಸಂದರ್ಭದಲ್ಲಿ ನಿನ್ನೆ ಹಮ್ಮಿಕೊಂಡಿದ್ದ ಬೃಹತ್ ರ್ಯಾಲಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕಳೆದ ವರ್ಷ ನಿನ್ನೆಯ ದಿನ ಜಗನ್ ಮೋಹನ್ ರೆಡ್ಡಿಯವರು ರಾಜ್ಯಕ್ಕೆ ಮೂರು ರಾಜಧಾನಿ ರಚಿಸುವ ಆಲೋಚನೆಯನ್ನು ಹರಿಬಿಟ್ಟಿದ್ದರು. ಅದು ದಕ್ಷಿಣ ಆಫ್ರಿಕಾ ರೀತಿಯಲ್ಲಿ ಆಡಳಿತ ಕಾರ್ಯವೈಖರಿ ನಡೆಸಲು ಅನುಕೂಲವಾಗುವಂತೆ ಎಂದು ಹೇಳಿದ್ದರು.
ಅದರಂತೆ ವಿಶಾಖಪಟ್ನಂನ್ನು ಆಡಳಿತಾತ್ಮಕ ರಾಜಧಾನಿಯನ್ನಾಗಿ, ಕರ್ನೂಲ್ ನ್ನು ನ್ಯಾಯಾಂಗ ರಾಜಧಾನಿ ಮತ್ತು ಅಮರಾವತಿ ಶಾಸಕಾಂಗ ಆಡಳಿತದ ರಾಜಧಾನಿಯನ್ನಾಗಿ ಮಾಡುವುದಾಗಿ ಜಗನ್ ಮೋಹನ್ ಸರ್ಕಾರ ಕಳೆದ ವರ್ಷ ಮಸೂದೆಯನನು ಅನುಮೋದಿಸಿತ್ತು.
ಅಮರಾವತಿಯನ್ನು ರಾಜ್ಯ ರಾಜಧಾನಿಯನ್ನಾಗಿ ಅಭಿವೃದ್ಧಿಪಡಿಸಲು 33 ಸಾವಿರಕ್ಕೂ ಹೆಚ್ಚು ಎಕರೆ ಫಲವತ್ತಾದ ಪ್ರದೇಶವನ್ನು ನೀಡಿರುವ ರೈತರು ಸರ್ಕಾರದ ಈ ನಿರ್ಧಾರ ವಿರೋಧಿಸಿ ಹೈಕೋರ್ಟ್ ಮೊರೆ ಹೋದರು. ಅದೀಗ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವುದರಿಂದ ಸದ್ಯ ಸರ್ಕಾರದ ನಿರ್ಧಾರಕ್ಕೆ ತಡೆ ಬಿದ್ದಿದೆ. ಕಳೆದ ವರ್ಷದಿಂದ ರೈತರು ವಿರೋಧ ಪಕ್ಷಗಳು, ಹಲವು ಸಂಘಟನೆಗಳ ಬೆಂಬಲದಿಂದ ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಾ ಅಮರಾವತಿಯನ್ನು ರಾಜ್ಯ ರಾಜಧಾನಿಯನ್ನಾಗಿ ಉಳಿಸಿಕೊಳ್ಳಬೇಕೆಂದು ಹೋರಾಟ ಮಾಡುತ್ತಿದ್ದಾರೆ.
ರಾಜ್ಯದ ಜನತೆ ರಾಜಧಾನಿಯನ್ನು ಬದಲಿಸಲು ಒಪ್ಪುತ್ತಿಲ್ಲ, ಸರ್ಕಾರ ಜನಾಭಿಪ್ರಾಯ ಸಂಗ್ರಹಿಸಲಿ, ರಾಜ್ಯದ ಜನತೆ ಸರ್ಕಾರದ ಪರವಾಗಿದ್ದರೆ ನಾನು ರಾಜಕೀಯ ತೊರೆಯುತ್ತೇನೆ ಎಂದು ಚಂದ್ರಬಾಬು ನಾಯ್ಡು ನಿನ್ನೆ ಸವಾಲು ಹಾಕಿದ್ದಾರೆ.
ಜಗನ್ ಮೋಹನ್ ರೆಡ್ಡಿ ಕೇವಲ ಒಂದು ಬಾರಿಯ ಮುಖ್ಯಮಂತ್ರಿಯಷ್ಟೆ, ನಂತರ ಕಸವನ್ನು ಕಸದಬುಟ್ಟಿಗೆ ಎಸೆದ ರೀತಿಯಲ್ಲಿ ಜನತೆ ಅವರನ್ನು ಮನೆಗೆ ಕಳುಹಿಸುತ್ತಾರೆ ಎಂದು ವ್ಯಂಗ್ಯವಾಡಿದರು.
Advertisement