ಅಯೋಧ್ಯೆಯಿಂದ 20 ಕಿ.ಮೀ ದೂರದಲ್ಲಿ ಮಸೀದಿಗೆ 5 ಎಕರೆ ಜಾಗ ನೀಡಿದ ಯೋಗಿ ಸರ್ಕಾರ

ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಟ್ರಸ್ಟ್ ರಚನೆ ಮಾಡುವುದಾಗಿ ಘೋಷಣೆ ಮಾಡಿದ ಬೆನ್ನಲ್ಲೇ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಅಯೋಧ್ಯೆಯಿಂದ 20 ಕಿ.ಮೀ. ದೂರದಲ್ಲಿ ಮಸೀದಿ ನಿರ್ಮಿಸುವುದಕ್ಕಾಗಿ 5 ಎಕರೆ ಜಮೀನು ಹಂಚಿಕೆ ಮಾಡಿದೆ.
ಯೋಗಿ ಆದಿತ್ಯನಾಥ
ಯೋಗಿ ಆದಿತ್ಯನಾಥ

ಲಖನೌ: ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಟ್ರಸ್ಟ್ ರಚನೆ ಮಾಡುವುದಾಗಿ ಘೋಷಣೆ ಮಾಡಿದ ಬೆನ್ನಲ್ಲೇ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಅಯೋಧ್ಯೆಯಿಂದ 20 ಕಿ.ಮೀ. ದೂರದಲ್ಲಿ ಮಸೀದಿ ನಿರ್ಮಿಸುವುದಕ್ಕಾಗಿ 5 ಎಕರೆ ಜಮೀನು ಹಂಚಿಕೆ ಮಾಡಿದೆ.

ಸುಪ್ರೀಂ ಕೋರ್ಟ್​ ನಿರ್ದೇಶನಾನುಸಾರ ಅಯೋಧ್ಯೆಯಲ್ಲಿ ಮಸೀದಿ ನಿರ್ಮಿಸಲು 5 ಎಕರೆ ಜಮೀನನ್ನು ಸುನ್ನಿ ಸೆಂಟ್ರಲ್​ ವಕ್ಫ್​ ಬೋರ್ಡ್ ಗೆ ನೀಡುವ ಪ್ರಸ್ತಾವನೆಗೆ ಯೋಗಿ ಆದಿತ್ಯನಾಥ್ ನೇತೃತ್ವದ ಸಚಿವ ಸಂಪುಟ ಸಭೆ ಇಂದು ಅನುಮೋದನೆ ನೀಡಿದೆ.

ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ನಿರ್ದೇಶಿಸಿದಂತೆ ಉತ್ತರ ಪ್ರದೇಶ ಸರ್ಕಾರ ಅಯೋಧ್ಯೆಗೆ ಸಮೀಪ ಗುರುತಿಸಿದ 5 ಎಕರೆ ಜಮೀನನ್ನು ಬುಧವಾರ ಸುನ್ನಿ ವಕ್ಫ್​ ಬೋರ್ಡ್​ಗೆ ಕೊಡಲು ತೀರ್ಮಾನಿಸಿದೆ ಎಂದು ಸರ್ಕಾರದ ವಕ್ತಾರರು ತಿಳಿಸಿದ್ದಾರೆ.

ಇನ್ನು ಉತ್ತರ ಪ್ರದೇಶ ಸರ್ಕಾರ ನೀಡುತ್ತಿರುವ 5 ಎಕರೆ ಜಮೀನು ಸ್ವೀಕರಿಸದಂತೆ ಆಲ್​ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್, ಸುನ್ನಿ ಸೆಂಟ್ರಲ್​ ವಕ್ಫ್​ ಬೋರ್ಡ್ ಗೆ ಒತ್ತಾಯಿಸಿದೆ.

ಒಂದು ವೇಳೆ ಉತ್ತರ ಪ್ರದೇಶ ಸರ್ಕಾರ ನೀಡುತ್ತಿರುವ 5 ಎಕರೆ ಜಮೀನನ್ನು ಸುನ್ನಿ ಸೆಂಟ್ರಲ್​ ವಕ್ಫ್​ ಬೋರ್ಡ್ ಸ್ವೀಕರಿಸಿದರೆ, ಅದು ದೇಶದ ಎಲ್ಲ ಮುಸಲ್ಮಾನರ ನಿರ್ಣಯವಾಗಲಾರದು ಎಂದು ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಹೇಳಿದೆ.  ಅಲ್ಲದೆ, ತಾನು ಮತ್ತು ತನ್ನ ಒಡನಾಡಿ ಸಂಸ್ಥೆ, ಸಂಘಟನೆಗಳು ಅಯೋಧ್ಯೆಯಲ್ಲಿ ಜಮೀನು ಸ್ವೀಕರಿಸಬಾರದು ಎಂಬ ನಿರ್ಣಯಕ್ಕೆ ಬಂದಿದ್ದೇವೆ ಎಂದು ಎಐಎಂಪಿಎಲ್​ಬಿಯ ಹಿರಿಯ ಕಾರ್ಯಕಾರಿ ಸದಸ್ಯ ಮೌಲಾನಾ ಯಾಸಿನ್ ಉಸ್ಮಾನಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com