ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಒಂದು ವೇಳೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜಯ ಗಳಿಸಿದರೆ ಅಭಿವೃದ್ಧಿ ಅಜೆಂಡಾಕ್ಕೆ ದೊರೆತ ಗೆಲುವಾಗಲಿದೆ. ಬಿಜೆಪಿ ಸೋಲಿನೊಂದಿಗೆ ಕೋಮು ಅಜೆಂಡಾಕ್ಕೆ ಕೊನೆಯಾಗಲಿದೆ ಎಂದು ಕಾಂಗ್ರೆಸ್ ಮುಖಂಡ ಅಧಿರ್ ರಂಜನ್ ಚೌದರಿ ಹೇಳಿದ್ದಾರೆ.
ಈ ಚುನಾವಣೆಯಲ್ಲಿ ನಾವು ಶಕ್ತಿಮೀರಿ ಹೋರಾಡುತ್ತಿವೆ. ಮುಖ್ಯಮಂತ್ರಿ ಕೇಜ್ರಿವಾಲ್ ಅವರ ಅಭಿವೃದ್ಧಿ ಅಜೆಂಡಾ ಮುನ್ನೆಲೆಗೆ ಬರುವುದೊಂದಿಗೆ ಬಿಜೆಪಿಯ ಕೋಮು ಅಜೆಂಡಾ ಕೊನೆಯಾಗಲಿದೆ ಎಂದು ಚೌದರಿ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ಬಿಜೆಪಿ ಎಲ್ಲಾ ಮುಖಂಡರನ್ನು ಇಲ್ಲಿಗೆ ಕರೆಸಿಕೊಂಡಿದ್ದು, ಶಾಹೀನ್ ಬಾಗ್ ಅಂತಾ ಘೋಷಣೆ ಕೂಗುತ್ತಿದ್ದರೆ ಮತ್ತೊಂದೆಡೆ ಕೇಜ್ರಿವಾಲ್ ಮೊಹಲ್ಲಾ ಕ್ಲಿನಿಕ್ , ಇತರ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರ ಧೀರ್ಘ ಕಾಲದ ಅಭಿವೃದ್ಧಿ ಕಾರ್ಯಗಳನ್ನು ಜನತೆಗೆ ತಿಳಿಸುವ ಕೆಲಸ ಮಾಡುತ್ತಿರುವುದಾಗಿ ಹೇಳಿದರು.
ಬಿಜೆಪಿ ಬಹುಮತದೊಂದಿಗೆ ಗೆಲುವು ಸಾಧಿಸಲಿದೆ ಎಂಬ ಬಿಜೆಪಿ ಮುಖಂಡ ಮನೋಜ್ ತಿವಾರಿ ಹೇಳಿಕೆ ಕುರಿತಂತೆ ಮಾತನಾಡಿದ ಅವರು, ಹಗಲು ಕನಸು ಕಾಣುವುದು ಅವರ ಮೂಲಭೂತ ಹಕ್ಕು ಆದರೆ ಬಿಜೆಪಿ ಈ ಚುನಾವಣೆಯಲ್ಲಿ ಗೆಲುವು ಸಾಧಿಸುವುದಿಲ್ಲ ಎಂದು ಭವಿಷ್ಯ ನುಡಿದರು.
ಚುನಾವಣಾ ಪೂರ್ವ ಸಮೀಕ್ಷೆಯಂತೆ 70 ಸದಸ್ಯ ಬಲದ ದೆಹಲಿಯಲ್ಲಿ ಎಎಪಿ 47 ಸ್ಥಾನಗಳಿಸುವುದರೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಊಹಿಸಲಾಗಿದೆ.
Advertisement