ಮುಂಬೈ: ಟ್ರಾವೆಲ್ಸ್ ಏಜೆಂಟರಿಗೆ ಹಣ ವಂಚನೆ ಮಾಡಿದ ಆರೋಪದ ಮೇಲೆ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಸೇರಿ ಮೂವರ ವಿರುದ್ಧ ಕೇಸು ದಾಖಲಾಗಿದೆ.
ತಮಗೆ ಸುಮಾರು 21 ಲಕ್ಷ ರೂಪಾಯಿ ವಂಚನೆ ಎಸಗಿದ್ದಾರೆ ಎಂದು ಟ್ರಾವಲ್ ಏಜೆಂಟ್ ಆರೋಪ ಮಾಡಿದ ಹಿನ್ನಲೆಯಲ್ಲಿ ಭಾರತದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಮತ್ತು ಇತರ ಇಬ್ಬರ ವಿರುದ್ಧ ಮಹಾರಾಷ್ಟ್ರದಲ್ಲಿ ದೂರು ದಾಖಲಾಗಿದೆ.
ಆದರೆ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಈ ಆರೋಪವನ್ನು ತಳ್ಳಿಹಾಕಿದ್ದು ತಮ್ಮ ವಿರುದ್ಧ ದೂರು ಸಲ್ಲಿಸಿರುವ ಮೊಹಮ್ಮದ್ ಶಹಬ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಮಹಾರಾಷ್ಟ್ರದ ಔರಂಗಬಾದ್ ನಗರದಲ್ಲಿರುವ ದನೀಶ್ ಟೂರ್ಸ್ ಅಂಡ್ ಟ್ರಾವಲ್ಸ್ ಏಜೆನ್ಸಿಯ ಮಾಲೀಕರಾಗಿರುವ ಶಹಬ್ ತಮ್ಮ ದೂರಿನಲ್ಲಿ, ಕಳೆದ ವರ್ಷ ನವೆಂಬರ್ ನಲ್ಲಿ ಮೊಹಮ್ಮದ್ ಅಜರುದ್ದೀನ್ ಮತ್ತು ಇತರ ಇಬ್ಬರ ಹೆಸರಿನಲ್ಲಿ ಅವರ ಖಾಸಗಿ ಸಹಾಯಕ ಮುಜಿಬ್ ಖಾನ್ ಮನವಿ ಮೇರೆಗೆ ಸುಮಾರು 20 ಲಕ್ಷದ 96 ಸಾವಿರ ರೂಪಾಯಿಗಳ ಹಲವು ಅಂತಾರಾಷ್ಟ್ರೀಯ ವಿಮಾನ ಟಿಕೆಟ್ ಬುಕ್ ಮಾಡಿದ್ದೆನು. ಆನ್ ಲೈನ್ ನಲ್ಲಿ ಟಿಕೆಟ್ ಹಣವನ್ನು ನೀಡುತ್ತೇನೆಂದು ಹೇಳಿದ್ದರೂ ಕೂಡ ಇದುವರೆಗೆ ಹಣ ಪಾವತಿಸಿಲ್ಲ ಎಂದು ದೂರು ನೀಡಿದ್ದಾರೆ.
ಟಿಕೆಟ್ ದರ ನೀಡಿ ಎಂದು ಕೇಳಿದರೆ ಮುಜಿಬ್ ಖಾನ್ 10 ಲಕ್ಷದ 6 ಸಾವಿರ ರೂಪಾಯಿ ವರ್ಗಾಯಿಸಿದ್ದೇನೆ ಎಂದು ಇಮೇಲ್ ಕಳುಹಿಸಿದ್ದಾರೆ. ಆದರೆ ತಮಗೆ ಹಣ ಸಿಕ್ಕಿಲ್ಲ ಎಂದಿದ್ದಾರೆ.
Advertisement