ನವದೆಹಲಿ: ದೆಹಲಿಯ ಚಾಂದ್ ಬಾಗ್ ಪ್ರದೇಶದಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದಿಂದ ಅಮಾನತುಗೊಂಡ ಕೌನ್ಸಿಲರ್ ತಹೀರ್ ಹುಸೇನ್ ಸೇರಿದಂತೆ 14 ಮಂದಿ ವಿರುದ್ಧ ದೆಹಲಿ ಪೊಲೀಸರು ಮಂಗಳವಾರ ಚಾರ್ಜ್ ಶೀಟ್ ದಾಖಲಿಸಿದ್ದಾರೆ.
ದೆಹಲಿ ಪೊಲೀಸರು ಇಂದು 1,030 ಪುಟಗಳ ಚಾರ್ಚ್ ಶೀಟ್ ಅನ್ನು ಕಾರ್ಕಾರ್ಡೂಮಾ ಕೋರ್ಟ್ ಗೆ ಸಲ್ಲಿಸಿದ್ದು, ಚಾಂದ್ ಬಾಗ್ ಪ್ರದೇಶದಲ್ಲಿ ನಡೆದ ಹಿಂಸಾಚಾರ ಪ್ರಕರಣದಲ್ಲಿ ಹುಸೇನ್ ಅವರನ್ನು ಪ್ರಮುಖ ಆರೋಪಿಯನ್ನಾಗಿ ಮಾಡಲಾಗಿದೆ. ಅಲ್ಲದೆ ಹುಸೇನ್ ಅವರು ಹಿಂಸಾಚಾರಕ್ಕಾಗಿ ಸುಮಾರು 1.30 ಕೋಟಿ ರೂ. ವೆಚ್ಚ ಮಾಡಿದ್ದಾರೆ ಎಂದೂ ದೂರಲಾಗಿದೆ. ಈ ಸಂಬಂಧ ತಾಹೀರ್ ಹುಸೇನ್ ಅವರ ಸಹೋದರ ಮತ್ತು ಇತರ 15 ಮಂದಿಯನ್ನು ಸಹ ಆರೋಪಿಗಳನ್ನಾಗಿ ಮಾಡಲಾಗಿದೆ.
ಜೂನ್ 16ರಂದು ಕೋರ್ಟ್ ಈ ಚಾರ್ಜ್ ಶೀಟ್ ಅನ್ನು ಪರಿಶೀಲಿಸಲಿದೆ.
ಹುಸೇನ್ ಅವರು ಚಾಂದ್ ಬಾಗ್ ನಲ್ಲಿ ಹಿಂಸಾಚಾರ ನಡೆಯುವ ಮುನ್ನ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ವಿರುದ್ಧದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಉಮರ್ ಖಾಲಿದ್ ಮತ್ತು ಖಾಲಿದ್ ಸೈಫಿ ಹಾಗೂ ಇತರರನ್ನು ಭೇಟಿ ಮಾಡಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ.
Advertisement