ಗಾಂಧಿನಗರ: ಜೂನ್ 19 ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ಗುಜರಾತಿನ ಮೂವರು ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿರುವಂತೆ ಎಚ್ಚೆತ್ತುಕೊಂಡ ಕಾಂಗ್ರೆಸ್ , ಮುಂದೆ ಸಂಭಾವ್ಯ ರಾಜೀನಾಮೆಯನ್ನು ತಪ್ಪಿಸುವ ಉದ್ದೇಶದಿಂದ ಉಳಿದಿರುವ 65 ಶಾಸಕರನ್ನು ಮೂರು ವಿವಿಧ ರೆಸಾರ್ಟ್ ಗಳಿಗೆ ಸ್ಥಳಾಂತರಿಸಿದೆ.
ಕೋವಿಡ್-19 ಸಾಂಕ್ರಾಮಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಸಭೆ ಸೇರಲು ನಿರ್ಬಂಧ ಇರುವ ಕಾರಣ ಅಂಬಾಜಿ, ರಾಜ್ ಕೋಟ್ ಹಾಗೂ ವಡೋದಾರದಲ್ಲಿನ ಮೂರು ರೆಸಾರ್ಟ್ ಗಳಿಗೆ ಕಾಂಗ್ರೆಸ್ ಶಾಸಕರನ್ನು ಕಳುಹಿಸಲಾಗಿದೆ.
ಈ ಮಧ್ಯೆ ಉತ್ತರ ಗುಜರಾತಿನ ಶಾಸಕರನ್ನು ರಾಜಸ್ತಾನದ ಅಂಬಾಜಿಯಲ್ಲಿನ ವೈಲ್ಡ್ ವಿಂಡ್ಸ್ ರೆಸಾರ್ಟ್ ಗೆ ಸ್ಥಳಾಂತರಿಸಲಾಗಿದೆ. ಸೌರಾಷ್ಟ್ರದ ಶಾಸಕರನ್ನು ರಾಜ್ ಕೋಟ್ ಬಳಿಯ ನೀಲ್ ಸಿಟಿ ರೆಸಾರ್ಟ್ ಹಾಗೂ ದಕ್ಷಿಣ ಮತ್ತು ಮಧ್ಯ ಗುಜರಾತಿನ ಶಾಸಕರನ್ನು ವಡೋದಾರದಲ್ಲಿನ ಉಮೇಟಾ ರೆಸಾರ್ಟ್ ಗೆ ಕರೆದೊಯ್ಯಲಾಗಿದೆ.
ಬಿಜೆಪಿಯಿಂದ ಶಾಸಕರ ಕುದುರೆ ವ್ಯಾಪಾರ ತಪ್ಪಿಸುವ ದೃಷ್ಟಿಯಿಂದ ಸುರಕ್ಷಿತ ಪ್ರದೇಶಗಳಿಗೆ ತಮ್ಮ ಪಕ್ಷದ ಶಾಸಕರನ್ನು ಕರೆದೊಯ್ಯಲಾಗಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ.
ಇಬ್ಬರು ಶಾಸಕರು ಕಾಂಗ್ರೆಸ್ ತೊರೆಯುವ ಸುಳಿವು ಇರುವುದಾಗಿ ಪಕ್ಷದ ಉನ್ನತ ನಾಯಕರೊಬ್ಬರು ತಿಳಿಸಿದ್ದಾರೆ. ಆ ಶಾಸಕರೊಂದಿಗೆ ಚರ್ಚೆ ನಡೆಸಿದ್ದೇವೆ. ಅವರ ಅಸಮಾಧಾನವನ್ನು ಬಗೆಹರಿಸುವುದಾಗಿ ಭರವಸೆ ನೀಡಿದ್ದೇವೆ. ಆಡಳಿತಾರೂಢ ಬಿಜೆಪಿ ಸರ್ಕಾರದ ಮೇಲೆ ತಮ್ಮಗೆ ನಂಬಿಕೆ ಇಲ್ಲ. ಅದಕಾರಣ ರೆಸಾರ್ಟ್ ಗೆ ಶಾಸಕರನ್ನು ಕರೆದೊಯ್ಯಲಾಗಿದೆ ಎಂದು ಹಿರಿಯ ಗುಜರಾತ್ ಪ್ರದೇಶ ಕಾಂಗ್ರೆಸ್ ಸಮಿತಿ ಸದಸ್ಯರೊಬ್ಬರು ತಿಳಿಸಿದ್ದಾರೆ.
Advertisement