ಚೀನಾ ಗಡಿ ಕುರಿತು ಅನಪೇಕ್ಷಿತ ಮತ್ತು ಬಾಲಿಶ ಹೇಳಿಕೆ: ರಾಹುಲ್ ವಿರುದ್ಧ ಸೇನಾ ಹಿರಿಯರ ಕಿಡಿ

ಲಡಾಖ್ ಗಡಿಯಲ್ಲಿ ಚೀನಾ ಜೊತೆಗಿನ ಭಾರತದ ಪ್ರಸ್ತುತ ನಿಲುವು ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಹೇಳಿಕೆಗಳು "ಅನಪೇಕ್ಷಿತ ಮತ್ತು ಶೋಚನೀಯ" ಎಂದು ಸಶಸ್ತ್ರ ಪಡೆಗಳ ಹಿರಿಯರು,ಪರಿಣತರು ಖಂಡಿಸಿದ್ದಾರೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ನವದೆಹಲಿ: ಲಡಾಖ್ ಗಡಿಯಲ್ಲಿ ಚೀನಾ ಜೊತೆಗಿನ ಭಾರತದ ಪ್ರಸ್ತುತ ನಿಲುವು ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಹೇಳಿಕೆಗಳು "ಅನಪೇಕ್ಷಿತ ಮತ್ತು ಶೋಚನೀಯ" ಎಂದು ಸಶಸ್ತ್ರ ಪಡೆಗಳ ಹಿರಿಯರು,ಪರಿಣತರು ಖಂಡಿಸಿದ್ದಾರೆ.

ಈ ಕುರಿತು ಗುರುವಾರ ಬಿಡುಗಡೆಗೊಳಿಸಿರುವ ಹೇಳಿಕೆಯಲ್ಲಿ 71 ಹಿರಿಯ ಅಧಿಕಾರಿಗಳು ಸಹಿ ಹಾಕಿದ್ದು, "ನಾವು ಸೇನೆ, ನೌಕಾಪಡೆ ಮತ್ತು ವಾಯುಸೇನೆಯಲ್ಲಿ ಸಾಕಷ್ಟು ಕಾಲ ಸೇವೆ ಸಲ್ಲಿಸಿದ ಅನುಭವಿಗಳು, ಪ್ರಸ್ತುತ ಲಡಾಖ್  ಗಡಿಯಲ್ಲಿ ಭಾರತೀಯ ಮತ್ತು ಚೀನಾದ ಪಡೆಗಳ ನಡುವಿನ ನಿಲುಗಡೆಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿಯವರ ಇತ್ತೀಚಿನ ಅನಪೇಕ್ಷಿತ ಟ್ವೀಟ್‌ಗಳು ಮತ್ತು ಕಾಮೆಂಟ್‌ಗಳು ಆತಂಕ  ಹುಟ್ಟಿಸುತ್ತವೆ ಎಂದಿದ್ದಾರೆ.

ರಾಹುಲ್ ಗಾಂಧಿ ಈ ವಿವಾದದ ಇತಿಹಾಸವನ್ನಾದರೂ ಓದಬೇಕೆಂದು ನಾವು ಬಯಸುತ್ತೇವೆ ಮತ್ತು 1962 ಅನ್ನು ಅವರು ಎಂದಿಗೂ ಮರೆಯಬಾರದು, ಅವರ ಮುತ್ತಜ್ಜ ಜವಾಹರಲಾಲ್ ನೆಹರೂ ಅವರೇ ನೇತೃತ್ವ ವಹಿಸಿದ್ದು, ಮತ್ತು ನಾವು ಆಗ ಸಂಪೂರ್ಣ ಸಿದ್ಧತೆಯಿಲ್ಲದೆ ಸಿಕ್ಕಿಬಿದ್ದಿದ್ದೆವು. ಅದರಿಂದ ಬಹಳ ಅವಮಾನವನ್ನು ಅನುಭವಿಸಬೇಕಾಯಿತು ನಮ್ಮ ಸೈನಿಕರು ಧೈರ್ಯದಿಂದ ಹೋರಾಡಿ ಚೀನಾಕ್ಕೆ ಭಾರಿ ಪ್ರಮಾಣದ ಸಾವುನೋವುಗಳನ್ನು ಉಂಟುಮಾಡಿದರೂ, ಚೀನಾದ ಕೈಯಲ್ಲಿ ಸೋಲು ಅನುಭವಿಸಬೇಕಾಯಿತು ಎಂದಿದ್ದಾರೆ.

ಆ ಸಮಯದಲ್ಲಿ, ಉನ್ನತ ರಾಜಕೀಯ ನಾಯಕರು ಅಕ್ಸಾಯ್ ಚಿನ್ ಸೇರಿದಂತೆ ಚೀನಾ ಆಕ್ರಮಿಸಿಕೊಂಡಿರುವ ನಮ್ಮ ಭೂಪ್ರದೇಶದ ಹಲವಾರು ಸಾವಿರ ಚದರ ಕಿಲೋಮೀಟರ್‌ಗಳನ್ನು ಬಿಟ್ಟುಕೊಟ್ಟರು ಮತ್ತು ಇಂದಿನ ವಿವಾದ ಮತ್ತು ನಿಲುವುಗಳು ಆ ಹಿಮಾಲಯದ ಪ್ರಮಾದದ ಪರಿಣಾಮಗಳಾಗಿವೆ ಎಂಬುದನ್ನು ಸಹ ಗಮನಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ಇಂತಹ ಹೇಳಿಕೆಗಳನ್ನು ನೀಡುವ ಪ್ರೇರಣೆ ಏನೇ ಇರಲಿ, ಅದೇ ನೈಜ ಸಂಗತಿಗಳನ್ನು ಮುಚ್ಚಿಡುವುದು ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುತ್ತದೆ. ಇದು ನಮ್ಮ ಮುಖ್ಯ ಕಾಳಜಿ. ಡೋಕ್ಲಾಮ್ ನಲ್ಲಿ  2017 ರಲ್ಲಿ ಭಾರತ ಮತ್ತು ಚೀನಾ ನಡುವೆ ಭಿನ್ನಾಭಿಪ್ರಾಯ ಉಂಟಾದಾಗ ರಾಹುಲ್ ಗಾಂಧಿ ಗಾಂಧಿ ಚೀನಾದ ರಾಜತಾಂತ್ರಿಕರೊಂದಿಗೆ ಔತಣಕೂಟ ಮಾಡುತ್ತಿದ್ದರು ಎಂಬುದು ಎಲ್ಲರಿಗೂ ತಿಳಿದಿದೆ.ಪಾಕಿಸ್ತಾನದ ಬಗ್ಗೆ ಗಾಂಧಿ ಹೇಳಿಕೆಗಳನ್ನು ಪಾಕಿಸ್ತಾನ ಸರ್ಕಾರ ತಮ್ಮ ಲಾಭಕ್ಕೆ ಬಳಸಿಕೊಂಡಿವೆ ಮತ್ತು ಬೆಂಬಲಿಸಿದೆ ಎಂದು ನಮಗೆಲ್ಲರಿಗೂ ತಿಳಿದಿದೆ.ಈ ಮೂಲಕ ಐಎಸ್ಐ ಪ್ರಾಯೋಜಿಸಿದ ಭಯೋತ್ಪಾದನೆ ಸೇರಿದಂತೆ ರಾಷ್ಟ್ರ ವಿರೋಧಿ ಪಡೆಗಳಿಗೆ ಉತ್ತೇಜನ ದೊರೆತಿದೆ" ಎಂದಿದ್ದಾರೆ.

"ನಿಸ್ಸಂದೇಹವಾಗಿ, ಇಂತಹ ಹೇಳಿಕೆಗಳು ವಿಶ್ವದ ಅತ್ಯುತ್ತಮ ವೃತ್ತಿಪರ ಶಕ್ತಿಗಳೆಂದು ಗುರುತಿಸಿಕೊಂಡಿರುವ ಮತ್ತು ಸ್ವಾತಂತ್ರ್ಯಾನಂತರ ದೇಶದಲ್ಲಿ ಸಕ್ರಿಯರಾಗಿರುವ ನಮ್ಮ ಸಶಸ್ತ್ರ ಪಡೆಗಳ ಸ್ಥೈರ್ಯ ಮತ್ತು ಧೈರ್ಯವನ್ನು ಕುಸಿಯುವಂತೆ ಮಾಡುತ್ತದೆ. ಇಂತಹ ಹೇಳಿಕೆಗಳನ್ನು ಮಾಧ್ಯಮಗಳು ಸೇರಿದಂತೆ ಇಡೀ ದೇಶ ಖಂಡಿಸಬೇಕು ಎಂದು ಹಿರಿಯ ಸೇನಾನಿಗಳು ಮನವಿ ಮಾಡಿದ್ದಾರೆ.

ಲಡಾಖ್‌ನಲ್ಲಿ ಚೀನಾದ ಒಳನುಸುಳುವಿಕೆ ಸಂಬಂಧ ಬುಧವಾರ ಸರ್ಕಾರದ ವಿರುದ್ಧ ದಾಳಿ ನಡೆಸಿದ್ದ ಪಕ್ಷದ ಹಿರಿಯ ಮುಖಂಡ ರಾಹುಲ್ ಗಾಂಧಿ, ಈ ವಿಷಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೌನವನ್ನು ಪ್ರಶ್ನಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com