ನವದೆಹಲಿ: ಗುಜರಾತ್ ನ ಸೂರತ್ ನಲ್ಲಿ ಬ್ಯಾಂಕ್ ನ ಮಹಿಳಾ ಸಿಬ್ಬಂದಿ ಮೇಲೆ ಹಲ್ಲೆ ವಿಚಾರವನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಹಣಕಾಸು ಸಚಿವಾಲಯ ಸಿಬ್ಬಂದಿ ಸೂರತ್ ನಗರ ಪೊಲೀಸ್ ಆಯುಕ್ತರ ಜೊತೆ ಮಾತನಾಡಿದ್ದು ಹಲ್ಲೆ ನಡೆದ ಬ್ಯಾಂಕಿಗೆ ಹೋಗಿ ನಡೆದ ಘಟನೆ ಬಗ್ಗೆ ವಿವರ ಪಡೆದು ಸಿಬ್ಬಂದಿ ಸುರಕ್ಷತೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಸೂರತ್ ನ ಕೆನರಾ ಬ್ಯಾಂಕ್ ನ ಮಹಿಳಾ ಉದ್ಯೋಗಿ ಮೇಲೆ ಕಚೇರಿ ಆವರಣದಲ್ಲಿ ನಡೆದ ಘಟನೆ ಬಗ್ಗೆ ಜಿಲ್ಲಾಧಿಕಾರಿ ಡಾ ಧವಲ್ ಪಟೇಲ್ ಅವರಿಗೆ ಕರೆ ಮಾಡಿ ಮಾಹಿತಿ ಪಡೆದಿದ್ದೇನೆ. ರಜೆಯ ಮೇಲೆ ತೆರಳಿರುವ ಅವರು ಕರ್ತವ್ಯಕ್ಕೆ ಬಂದ ಕೂಡಲೇ ದಾಖಲಿಸಿಕೊಂಡಿರುವ ಎಫ್ಐಆರ್ ಮೇಲೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಬ್ಯಾಂಕ್ ಗಳಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲಾ ಸಿಬ್ಬಂದಿಗಳ ಸುರಕ್ಷತೆ ನಮಗೆ ಅತ್ಯಂತ ಮುಖ್ಯವಾಗಿದೆ. ಕೊರೋನಾ ಸಂಕಷ್ಟದ ಮಧ್ಯೆ ಬ್ಯಾಂಕ್ ಗಳಲ್ಲಿ ಸಿಬ್ಬಂದಿ ಜನತೆಗೆ ಅಗತ್ಯ ಸೇವೆಗಳನ್ನು ನೀಡುತ್ತಿರುವುದು ಶ್ಲಾಘನೀಯ. ಬ್ಯಾಂಕ್ ಸಿಬ್ಬಂದಿಯ ಸುರಕ್ಷತೆ ಮತ್ತು ಘನತೆ, ಗೌರವಗಳಿಗೆ ಯಾರೂ ಧಕ್ಕೆ ತರಲು ಸಾಧ್ಯವಿಲ್ಲ ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಸೂರತ್ ನಗರ ಪೊಲೀಸ್ ಆಯುಕ್ತರೇ ಖುದ್ದಾಗಿ ಹಲ್ಲೆ ನಡೆದ ಬ್ಯಾಂಕಿಗೆ ಹೋಗಿ ಅಲ್ಲಿನ ಸಿಬ್ಬಂದಿ ಸುರಕ್ಷತೆ ಬಗ್ಗೆ ವಿಚಾರಿಸುತ್ತೇನೆ. ಆರೋಪಿ ಕಾನ್ಸ್ಟೇಬಲ್ ನ್ನು ಕೂಡಲೇ ಸೇವೆಯಿಂದ ಅಮಾನತು ಮಾಡುವುದಾಗಿ ಕೂಡ ಭರವಸೆ ನೀಡಿದ್ದಾರೆ ಎಂದಿದ್ದಾರೆ.
Advertisement