ಮುಂಬೈ: ತೀವ್ರ ಜ್ವರದಿಂದ ಬಳಲುತ್ತಿದ್ದ ಜಲ್ಗೌನ್ ನ 22 ವರ್ಷದ ವೈದ್ಯ ಕನಿಷ್ಠವೆಂದರೂ 5 ಖಾಸಗಿ ಆಸ್ಪತ್ರೆಯ ಕದ ತಟ್ಟಿದ್ದಾರೆ. ಆದರೆ ಕೊರೋನಾ ವೈರಸ್ ನ ಶಂಕೆಯಿಂದ ಬಳಲುತ್ತಿರುವ ಅವರನ್ನು ದಾಖಲಾತಿ ಮಾಡಿಕೊಳ್ಳಲು ಆಸ್ಪತ್ರೆಗಳು ನಿರಾಕರಿಸುತ್ತಿವೆ.
ಈ 22 ವರ್ಷದ ವೈದ್ಯನನ್ನು ಮುಂಬೈಯ ಸರ್ ಜೆಜೆ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ. ಇವರ ತವರೂರು ಮುಂಬೈಯಿಂದ 400 ಕಿಲೋ ಮೀಟರ್ ದೂರದಲ್ಲಿರುವ ಭುಸವಾಲ್. ಈ ವೈದ್ಯ ಗಂಭೀರವಾಗಿದ್ದು ಸದ್ಯ ವೆಂಟಿಲೇಟರ್ ನಲ್ಲಿಡಲಾಗಿದೆ. ಸದ್ಯ ಮುಂಬೈಯ ಸರ್ಕಾರಿ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಕೊಲ್ಹಾಪುರದಲ್ಲಿ ಅಧ್ಯಯನ ನಡೆಸುತ್ತಿದ್ದ ವೈದ್ಯರು ಪುಣೆಯಲ್ಲಿ ಕೆಲ ದಿನಗಳ ಕಾಲ ವಾಸಿಸಿ ನಂತರ ಜಲ್ಗೌನ್ ಜಿಲ್ಲೆಯ ಬುಸವಾಲ್ ಗೆ ಆಗಮಿಸಿದ್ದರು. ಜ್ವರದಿಂದ ಬಳಲುತ್ತಿದ್ದ ಅವರು ಖಾಸಗಿ ಆಸ್ಪತ್ರೆಗೆ ಹೋದರೆ ದಾಖಲಿಸಿಕೊಳ್ಳಲು ನಿರಾಕರಿಸಿದರು.
ವೈದ್ಯ ವೃಂದ ಮೂಲತಃ ವೈದ್ಯರಿಗೇ ಚಿಕಿತ್ಸೆ ನೀಡಲು ನಿರಾಕರಿಸಿದ್ದು ನಮಗೆ ಆಘಾತವನ್ನುಂಟುಮಾಡಿದೆ. ಪ್ರಾಥಮಿಕ ಚಿಕಿತ್ಸೆಯನ್ನಾದರೂ ನೀಡಬೇಕಾಗಿತ್ತು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೆ ಸುಸ್ತಾಗಿ ಕೊನೆಗೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಕೂಡ ಕೊರೋನಾ ವೈರಸ್ ಗೆ ಚಿಕಿತ್ಸೆಯಿಲ್ಲ ಎಂದು ಹೇಳಲಾಯಿತು. ರಕ್ತದ ಮಾದರಿಯನ್ನು ತೆಗೆದುಕೊಳ್ಳದೆ ಅವರನ್ನು ಕೊರೋನಾ ವೈರಸ್ ರೋಗಿ ಎಂದು ತೀರ್ಮಾನಿಸಲಾಯಿತು ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಪ್ರತಿಭಾ ಶಿಂಧೆ.
Advertisement