ಊಟ ಬಿಟ್ಟು, ರಾತ್ರಿನಿದ್ರೆಯಿಲ್ಲದೆ ಆತಂಕದಲ್ಲೇ ಕಾಲ ಕಳೆದ 'ನಿರ್ಭಯಾ' ಹಂತಕರು

ಕ್ಷಣಕ್ಷಣಕ್ಕೂ ಎದುರಾದ ಕಾನೂನಿನ ಆತಂಕ ಮೀರಿ ನಿರ್ಭಯಾ ಅತ್ಯಾಚಾರಿಗಳಿಗೆ ಕೊನೆಗೂ ಗಲ್ಲು ಶಿಕ್ಷೆ ಜಾರಿಯಾಗಿದ್ದು, ಇದೀಗ ದೇಶವೇ ನಿಟ್ಟಿಸಿರುಬಿಟ್ಟಿದೆ. ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನಾಲ್ವರು ಅಪರಾಧಿಗಳನ್ನು ಒಟ್ಟಿಗೆ ಗಲ್ಲಿಗೇರಿಸಲಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಕ್ಷಣಕ್ಷಣಕ್ಕೂ ಎದುರಾದ ಕಾನೂನಿನ ಆತಂಕ ಮೀರಿ ನಿರ್ಭಯಾ ಅತ್ಯಾಚಾರಿಗಳಿಗೆ ಕೊನೆಗೂ ಗಲ್ಲು ಶಿಕ್ಷೆ ಜಾರಿಯಾಗಿದ್ದು, ಇದೀಗ ದೇಶವೇ ನಿಟ್ಟಿಸಿರುಬಿಟ್ಟಿದೆ. ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನಾಲ್ವರು ಅಪರಾಧಿಗಳನ್ನು ಒಟ್ಟಿಗೆ ಗಲ್ಲಿಗೇರಿಸಲಾಗಿದೆ. 

ಇಂದು ಬೆಳಿಗ್ಗೆ 5.30ಕ್ಕೆ ನಾಲ್ವರು ದೋಷಿಗಳನ್ನು ನೇಣುಗಂಬಕ್ಕೆ ಏರಿಸಲಾಗಿದ್ದು, ಹತ್ಯಾಚಾರಿಗಳು ಅಂತಿಮ ಕ್ಷಣದಲ್ಲೂ ತಮ್ಮನ್ನು ರಕ್ಷಣೆ ಮಾಡಲು ಹೋರಾಟ ಮಾಡಿದ್ದಾರೆ. ತಡರಾತ್ರಿ 3 ಗಂಟೆ ಸುಮಾರಿಗೆ ಅಪರಾಧಿಗಳು ಸಲ್ಲಿಸಿದ್ದ ಅಂತಿ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದ್ದು, ಬಳಿಕ ಅಪರಾಧಿಗಳನ್ನು ಹ್ಯಾಂಗ್ ಮನ್ ಪವನ್ ಜಲ್ಲಾ ಅವರು ತಿಹಾಕ್ ಜೈಲಿನಲ್ಲಿ ನೇಣಿಗೇರಿಸಿದರು. 

ನೇಣುಗಂಬಕ್ಕೇರುವ ಕೆಲವೇ ಸಮಯಗಳ ಮುಂಚೆ ಅಪರಾಧಿಗಳ ಪರ ವಕೀಲ ಗಲ್ಲು ಶಿಕ್ಷೆಗೆ ತಡೆಕೋರಿ ದೆಹಲಿ ಹೈಕೋರ್ಟ್'ಗೆ ಅರ್ಜಿ ಸಲ್ಲಿಸಿದ್ದರು. ಕೊರೋನಾ ವೈರಸ್ ಕಾರಣದಿಂದಾಗಿ ದಾಖಲೆಗಳ ಕೊರತೆಯಿಂದಾಗಿ ತುರ್ತು ಮನವಿಯನ್ನು ಸಲ್ಲಿಸಲಾಗಿದೆ ಎಂದು ವಕೀಲರು ತಿಳಿಸಿದ್ದಾರೆ, ಆದರೆ ನ್ಯಾಯಾಲಯ ಈಗಾಗಲೇ ಮರಣದಂಡನೆ ನಿಲ್ಲಿಸುವ ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಹೇಳಿ ಅರ್ಜಿಯನ್ನು ತಿರಸ್ಕರಿಸಿತ್ತು. 

ಇದರಂತೆ ದೋಷಿಗಳಾದ ಮುಕೇಶ್ ಕುಮಾರ್, ವಿನಯ್ ಕುಮಾರ್ ಶರ್ಮಾ, ಪವನ್ ಕುಮಾರ್ ಗುಪ್ತ, ಅಕ್ಷಯ್ ಕುಮಾರ್ ಸಿಂಗ್ ರನ್ನು ಗಲ್ಲುಗಂಬಕ್ಕೇರಿಸಲಾಯಿತು. 

ಅಂತಿಮ ಕ್ಷಣಗಳಲ್ಲಿ ದೋಷಿಗಳು ಏಕಾಂಗಿಯಾಗಿ, ಪ್ರತ್ಯೇಕವಾದ ಜೈಲು ಕೊಠಡಿಗಳಲ್ಲಿ ಕಾಲ ಕಳೆದರು. ಊಟವ್ಯವಸ್ಥೆ ಮಾಡಲಾಗಿತ್ತಾದರೂ ಅಪರಾಧಿಗಳು ಊಟ ಮಾಡಿಲ್ಲ. 

ಊಟವನ್ನು ತಿರಸ್ಕರಿಸಿದ್ದ ಅಪರಾಧಿಗಳು ಇಡೀ ರಾತ್ರಿ ನಿದ್ರೆ ಮಾಡಿಲ್ಲ. ನೇಣು ಶಿಕ್ಷೆಗೂ ಮುನ್ನ ಇಡೀ ರಾತ್ರಿ ಜೈಲಿಗೆ ಬೀಗ ಮುದ್ರೆ ಜಡಿಯಲಾಗಿತ್ತು. ಮುಂಜಾನೆ 3.30ಕ್ಕೆ ಎಚ್ಚರಗೊಂಡ ಅಪರಾಧಿಗಳು, ಸಾಕಷ್ಟು ಚಡಪಡಿಸುತ್ತಿದ್ದರು. ಗಲ್ಲು ಶಿಕ್ಷೆಗೆ ಸಿದ್ಧರಾಗಲು ಒಪ್ಪಿರಲಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಗಲ್ಲು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಕಾನೂನಿನ ಎಲ್ಲಾ ಅವಕಾಶಗಲನ್ನು ಅಪರಾಧಿಗಳು ದುರ್ಬಳಕೆ ಮಾಡಿಕೊಂಡು, ವಿಳಂಬ ತಂತ್ರ ಅನುಸರಿಸುತ್ತಿದ್ದರು. ಆದರೆ, ನ್ಯಾಯಾಲಯದಲ್ಲಿ ಅಪರಾಧಿಗಳಿಗೆ ಯಾವುದೇ ವಿನಾಯಿತಿ ಸಿಗಲಿಲ್ಲ. ರಾಷ್ಟ್ರಪತಿಗಳಿಂದಲೂ ಕ್ಷಮೆ ಸಿಗಲಿಲ್ಲ. ಕೊನೆಯವರೆಗೂ ಪರದಾಡಿದ್ದರು. 

ಕೊನೆ ಕ್ಷಣದಲ್ಲಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಅಕ್ಷಯ್ ಠಾಕೂರ್ ಪರ ವಕೀಲರು, ಅಪರಾಧಿಗಳನ್ನು ಇಂಡೋ-ಪಾಕ್ ಗಡಿ, ಚೀನಾ ಭಾರತದ ಡೋಕ್ಲಾಮ್ ಗಡಿಗಾದರೂ ಕಳುಹಿಸಿ ಆದರೆ, ನೇಣಿಗೆ ಮಾತ್ರ ಹಾಕಬೇಡಿ ಎಂದು ಮನವಿ ಮಾಡಿಕೊಂಡರು. ಆದರೆ, ಈ ಎಲ್ಲಾ ಮನವಿಯನ್ನು ತಿರಸ್ಕರಿಸಿದ ನ್ಯಾಯಾಲಯ, ಎಲ್ಲಾ ಬಾಗಿಲುಗಳು ಮುಚ್ಚಿವೆ ಎಂದು ತಿಳಿಸಿತು ಎಂದು ಹೇಳಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com