ಚಂಡೀಗಢ/ಶಿಮ್ಲಾ: ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತ ಲಾಕ್ ಡೌನ್ ಘೋಷಿಸಿದರೂ ಬಿಜೆಪಿ ಆಡಳಿತವಿರುವ ಹರಿಯಾಣ ಮತ್ತು ಮಧ್ಯ ಪ್ರದೇಶದಲ್ಲಿ ಮದ್ಯದಂಗಡಿಗಳನ್ನು ಬಂದ್ ಮಾಡಿರಲಿಲ್ಲ. ಇದಕ್ಕೆ ಸಾರ್ವಜನಿಕರು ಮತ್ತು ಮಾಧ್ಯಮಗಳಿಂದ ತೀವ್ರ ಟೀಕೆ ವ್ಯಕ್ತವಾದ ನಂತರ ಎಚ್ಚೆತ್ತುಕೊಂಡ ಹರಿಯಾಣ ಮತ್ತು ಹಿಮಾಚಲ ಪ್ರದೇಶ ಸರ್ಕಾರಗಳು ಶುಕ್ರವಾರದಿಂದ ಮದ್ಯ ವ್ಯಾಪಾರ ಬಂದ್ ಮಾಡಿವೆ.
ಲಾಕ್ ಡೌನ್ ನಡುವೆಯೂ ಹಾಲಿನ ಅಂಗಡಿಗಿಂತಲೂ ಹೆಚ್ಚು ಜನ ಮದ್ಯದಂಗಡಿ ಮುಂದೆ ಸೇರಿರುವುದನ್ನು ಹೆಚ್ಚು ಪ್ರಸಾರ ಮಾಡಿದ್ದ ಮಾಧ್ಯಮಗಳು, ಕೊರೋನಾ ವೈರಸ್ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಬಿಜೆಪಿ ಸರ್ಕಾರಗಳ ನಿರ್ಧಾರವನ್ನು ಕಟುವಾಗಿ ಟೀಕಿಸಿದ್ದವು.
ಇಂದು ಮಧ್ಯ ರಾತ್ರಿಯಿಂದ ಏಪ್ರಿಲ್ 14ರ ವರೆಗೆ ರಾಜ್ಯದ ಎಲ್ಲಾ ಮದ್ಯದಂಗಡಿಗಳನ್ನು ಬಂದ್ ಮಾಡುವಂತೆ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಆದೇಶಿಸಿದ್ದಾರೆ.
ಹರಿಯಾಣದಂತೆ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಅವರು ಸಹ ತಮ್ಮ ರಾಜ್ಯದಲ್ಲಿ ಇಂದಿನಿಂದ ಎಲ್ಲಾ ಮದ್ಯದಂಗಡಿ ಬಂದ್ ಮಾಡುವುದಾಗಿ ಹೇಳಿದ್ದಾರೆ.
Advertisement
Advertisement