ನವದೆಹಲಿ: ಆಗ್ನೇಯ ಬಂಗಾಳ ಕೊಲ್ಲಿಯ ಮೇಲೆ ಮತ್ತು ಸುತ್ತಮುತ್ತ ‘ಆಂಫಾನ್’ಚಂಡಮಾರುತ ಬೀಸುವ ಸಾಧ್ಯತೆಯಿದ್ದು ಮುಂದಿನ 12 ಗಂಟೆಗಳಲ್ಲಿ ತೀವ್ರವಾದ ಬಿರುಗಾಳಿ ಸಹಿತ ಚಂಡಮಾರುತ ಬೀಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಗಂಟೆಗೆ 55ರಿಂದ 65 ಕಿಲೋ ಮೀಟರ್ ವೇಗದಲ್ಲಿ 75 ಕಿಲೋ ಮೀಟರ್ ವರೆಗೆ ಈ ‘ಆಂಫಾನ್’ ಚಂಡಮಾರುತ ಬೀಸಲಿದ್ದು ಇದು ತೀವ್ರವಾಗಿರುತ್ತದೆ ಎಂದು ಇಲಾಖೆ ತಿಳಿಸಿದೆ.
ಇಂದು ಸಂಜೆಯ ಹೊತ್ತಿಗೆ ಚಂಡಮಾರುತದ ವೇಗ ತೀವ್ರವಾಗಿ 24 ಗಂಟೆಯೊಳಗೆ ಭಾರತದ ಪೂರ್ವ ಭಾಗದಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ.
ಇದು ಆರಂಭದಲ್ಲಿ ಇಂದು ಸಂಜೆಯವರೆಗೆ ವಾಯವ್ಯ ದಿಕ್ಕಿಗೆ ಚಲಿಸುವ ಸಾಧ್ಯತೆಯಿದ್ದು ನಂತರ ಉತ್ತರ-ಈಶಾನ್ಯ ದಿಕ್ಕಿನಲ್ಲಿ ವಾಯುವ್ಯ ಬಂಗಾಳ ಕೊಲ್ಲಿಯ ಮೂಲಕ ಪಶ್ಚಿಮ ಬಂಗಾಳ ಕರಾವಳಿಯ ಕಡೆಗೆ ನಾಳೆಯಿಂದ 20 ರವರೆಗೆ ಚಲಿಸುತ್ತದೆ.
ಈ ಸಂದರ್ಭದಲ್ಲಿ ಆಂಧ್ರ ಪ್ರದೇಶ ಮತ್ತು ಒಡಿಶಾ-ಪಶ್ಚಿಮ ಬಂಗಾಳ ಸಮುದ್ರ ತೀರಕ್ಕೆ ನಾಳೆಯಿಂದ ಮೀನುಗಾರರು ಇಳಿಯದಂತೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.ಈಗಾಗಲೇ ಸಮುದ್ರಕ್ಕೆ ಮೀನುಗಾರಿಕೆ ಇಳಿದಿರುವವರು ಇಂದು ಸಂಜೆಯೊಳಗೆ ಹಿಂತಿರುಗುವಂತೆ ಎಚ್ಚರಿಕೆ ನೀಡಲಾಗಿದೆ.
Advertisement