ಅಗರ್ತಲ: ಉತ್ತರ ತ್ರಿಪುರಾದ ಪಾಣಿಸಾಗರ್ ಪ್ರದೇಶದ ಚಾಂಟಿಲ್ಲಾ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಜಂಟಿ ಚಳವಳಿ ಸಮಿತಿ(ಜೆಎಂಸಿ) ಕಾರ್ಯಕರ್ತರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಘರ್ಷಣೆಯಲ್ಲಿ ಓರ್ವ ನಾಗರಿಕ ಗುಂಡೇಟಿನಿಂದ ಸಾವನ್ನಪ್ಪಿದ್ದು, ಐವರು ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸೇರಿದಂತೆ ಕನಿಷ್ಠ 9 ಮಂದಿ ಗಾಯಗೊಂಡಿದ್ದಾರೆ.
6,000 ಕ್ಕೂ ಹೆಚ್ಚು ಸ್ಥಳಾಂತರಗೊಂಡ ಮಿಜೋರಾಂನ ಬ್ರು ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸುವ ರಾಜ್ಯ ಸರ್ಕಾರದ ಕ್ರಮದ ವಿರುದ್ಧ ಕಳೆದ ಆರು ದಿನಗಳಿಂದ ಜೆಎಂಸಿ ಚಳವಳಿಯ ಭಾಗವಾಗಿ ಪಾನಿಸಾಗರದಲ್ಲಿ ರಸ್ತೆ ತಡೆ ನಡೆಸಲಾಗುತ್ತಿತ್ತು.
ವಿದ್ಯಾರ್ಥಿಗಳು ಮತ್ತು ಯುವಕರು ಸೇರಿದಂತೆ ಸಾವಿರಾರರು ನಾಗರಿಕರು ಪಾನಿಸಾಗರ್ ಗೆ ತೆರಳುತ್ತಿದ್ದಾಗ ಭದ್ರತಾ ಸಿಬ್ಬಂದಿ ತಡೆದಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಪಾನಿಸಾಗರ್ ನಲ್ಲಿ ಕಳೆದ ರಾತ್ರಿಯಿಂದ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿ, ಅಶ್ರವಾಯು ಪ್ರಯೋಗವನ್ನೂ ಮಾಡಿದ್ದಾರೆ.
“ಆಂದೋಲನವು ಕಾಂಚನಪುರದಲ್ಲಿತ್ತು. ಆದರೆ ಪ್ರತಿಭಟನಾಕಾರರು ಪಾಣಿಸಾಗರ್ನ ರಾಷ್ಟ್ರೀಯ ಹೆದ್ದಾರಿಯಲ್ಲಿ ಧರಣೆ ನಡೆಸಲು ಯತ್ನಿಸಿದಾಗ ಸ್ವಲ್ಪ ಹಿಂಸಾಚಾರ ನಡೆದಿದೆ. ನಾವು ಹೆಚ್ಚಿನ ಪಡೆಗಳನ್ನು ಸ್ಥಳಕ್ಕೆ ರವಾನಿಸಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ತರುತ್ತಿದ್ದೇವೆ ಎಂದು ಪಾಣಿಸಾಗರ್ ಉಪವಿಭಾಗದ ಮ್ಯಾಜಿಸ್ಟ್ರೇಟ್ ಲಾಲ್ನುನ್ನೆಮಿ ಡಾರ್ಲಾಂಗ್ ಅವರು ಹೇಳಿದ್ದಾರೆ.
Advertisement