ಕೊಲ್ಕತ್ತಾ: ಪಕ್ಷದ ನಾಯಕತ್ವದೊಂದಿಗೆ ಮುನಿಸಿಕೊಂಡಿದ್ದ ತೃಣಮೂಲ ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಪಶ್ಚಿಮ ಬಂಗಾಳ ಸಾರಿಗೆ ಸಚಿವ ಸುವೇಂದು ಅಧಿಕಾರಿ ಅವರು ಶುಕ್ರವಾರ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅವರ ಮುಂದಿನ ರಾಜಕೀಯ ನಡೆ ಕುತೂಹಲ ಮೂಡಿಸಿದೆ.
ಅಧಿಕಾರಿ ಅವರು ಫ್ಯಾಕ್ಸ್ ಮೂಲಕ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ರವಾನಿಸಿದ್ದಾರೆ. ಅಲ್ಲದೆ ಇ-ಮೇಲ್ ಮೂಲಕ ರಾಜ್ಯಪಾಲ ಜಗದೀಪ್ ಧನ್ ಖಾರ್ ಅವರಿಗೂ ರಾಜೀನಾಮೆ ಸಲ್ಲಿಸಿದ್ದಾರೆ.
ನಾನು ಸಾರಿಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಕೂಡಲೇ ನನ್ನ ರಾಜೀನಾಮೆಯನ್ನು ಅಂಗೀಕರಿಸಬೇಕು. ನನ್ನ ರಾಜೀನಾಮೆಯ ಪತ್ರವನ್ನು ಇ-ಮೇಲ್ ಮೂಲಕ ರಾಜ್ಯಪಾಲರಿಗೂ ರವಾನಿಸಿರುವುದಾಗಿ ಸಿಎಂಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ರಾಜ್ಯದ ಜನತೆಯ ಸೇವೆ ಮಾಡಲು ಅವಕಾಶ ನೀಡಿದಕ್ಕಾಗಿ ನಿಮಗೆ ಧನ್ಯವಾದಗಳು. ನಾನು ಪ್ರಾಮಾಣಿಕವಾಗಿ ಕರ್ತವ್ಯ ನಿಷ್ಠೆಯಿಂದ ಕಾರ್ಯನಿರ್ವಹಿಸಿದ್ದೇನೆ ಎಂದು ಅಧಿಕಾರಿ ಪತ್ರದಲ್ಲಿ ಹೇಳಿದ್ದಾರೆ.
ಈ ಬೆಳವಣಿಗೆ ಬಗ್ಗೆ ಟಿಎಂಸಿ ಮೌನ ವಹಿಸಿದರೆ ಬಿಜೆಪಿ, ಇದು ಇಪಕ್ಷದ ಉನ್ನತ ನಾಯಕರ ವಿರುದ್ಧ ಟಿಎಂಸಿ ನಾಯಕರ ಆಕ್ರೋಶದ ಪ್ರತಿಬಿಂಬ ಎಂದು ಹೇಳಿದೆ.
Advertisement