ನವದೆಹಲಿ: ಬಿಹಾರದ ಎನ್ಡಿಎ ನಿಂದ ಹೊರನಡೆದ ಮಾರನೇ ದಿನವೇ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಲೋಕ ಜನಶಕ್ತಿ ಪಕ್ಷ(ಎಲ್ಜೆಪಿ)ದ ಅಧ್ಯಕ್ಷ ಚಿರಾಗ್ ಪಾಸ್ವಾನ್ ಅವರು, ಜೆಡಿಯುಗೆ ಯಾವುದೇ ಕಾರಣಕ್ಕೂ ಮತ ಹಾಕಬೇಡಿ ಎಂದು ಜನತೆಗೆ ಮನವಿ ಮಾಡಿದರು.
ವಿಧಾನಸಭೆ ಚುನಾವಣೆಯ ನಂತರ ಎಲ್ ಜೆಪಿ - ಬಿಜೆಪಿ ಮೈತ್ರಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಪಾಸ್ವಾನ್ ಅವರು ಬಹಿರಂಗ ಪತ್ರದಲ್ಲಿ ತಿಳಿಸಿದ್ದಾರೆ.
ನಿತೀಶ್ ಕುಮಾರ್ ನಾಯಕತ್ವದಲ್ಲಿ ಚುನಾವಣೆ ಎದುರಿಸುವುದು ಸಾಧ್ಯವೇ ಇಲ್ಲ ಎಂದು ಘೋಷಿಸಿರುವ ಎಲ್ಜೆಪಿ, ಜೆಡಿಯು ವಿರುದ್ಧ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿದೆ.
ಅಕ್ಟೋಬರ್ 28 ರಿಂದ ಪ್ರಾರಂಭವಾಗುವ ಮೂರು ಹಂತದ ಬಿಹಾರ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ಬೆಂಬಲ ಕೋರಿರುವ ಪಾಸ್ವಾನ್ ಅವರು, ಜನತಾದಳ(ಯುನೈಟೆಡ್) ಗೆ ಮತ ನೀಡಿದರೆ ನಾಳೆ ನಿಮ್ಮ ಮಕ್ಕಳು ವಲಸೆ ಹೋಗುವುದಕ್ಕೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ.
Advertisement