ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ರೈತರು ಸೇರಿದಂತೆ ರಾಜ್ಯದ ಪ್ರವಾಹ ಪೀಡಿತ ಜನರಿಗೆ 10,000 ಕೋಟಿ ರೂ. ನೆರವು ಘೋಷಿಸಿದ್ದಾರೆ.
ಈ ಸಂಬಂಧ ಮಹಾ ವಿಕಾಸ್ ಅಘಾಡಿ(ಎಂವಿಎ)ಯ ಪ್ರಮುಖ ನಾಯಕರೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಠಾಕ್ರೆ, ದೀಪಾವಳಿಯಿಂದ ಈ ನೆರವು ನೀಡಲಾಗುವುದು ಎಂದು ಹೇಳಿದರು.
ಮಹಾರಾಷ್ಟ್ರ ಸರ್ಕಾರವು ಇನ್ನೂ 38,000 ಕೋಟಿ ರೂಪಾಯಿಯನ್ನು ಕೇಂದ್ರದಿಂದ ಪಡೆಯಬೇಕಾಗಿದೆ ಎಂದು ಠಾಕ್ರೆ ಹೇಳಿದ್ದಾರೆ.
"ನಾನು ಈ ಹಣಕಾಸಿನ ನೆರವಿಗೆ ಪ್ಯಾಕೇಜ್ ಎಂಬ ಪದ ಬಳಸಲು ಇಷ್ಟಪಡುವುದಿಲ್ಲ, ಆದರೆ ನಾವು 10,000 ಕೋಟಿ ರೂಪಾಯಿಗಳ ಸಹಾಯವನ್ನು ನೀಡುತ್ತೇವೆ. ಇದನ್ನು ವಿವಿಧ ಉದ್ದೇಶಗಳಿಗಾಗಿ ಬಳಸಲಾಗುತ್ತದೆ" ಎಂದು ಮಹಾ ಸಿಎಂ ತಿಳಿಸಿದರು.
ಕಳೆದ ವಾರ ಭಾರಿ ಮಳೆ ಮತ್ತು ಪ್ರವಾಹ ಪುಣೆ, ಔರಂಗಾಬಾದ್ ಮತ್ತು ಕೊಂಕಣ ವಿಭಾಗಗಳಲ್ಲಿ ಹಲವಾರು ಜೀವಗಳನ್ನು ಬಲಿ ತೆಗೆದುಕೊಂಡಿದ್ದು, ಇದರಿಂದಾಗಿ ಒಂದು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ಹಾನಿಯಾಗಿದೆ.
Advertisement