ಶ್ರೀನಗರ: ಜುಲೈ ತಿಂಗಳಲ್ಲಿ ನಡೆದಿದ್ದ ಶೋಪಿಯಾನ್ ಎನ್ ಕೌಂಟರ್ ಪ್ರಕರಣದಲ್ಲಿ ಮೇಲ್ನೋಟಕ್ಕೆ ಸೇನೆಯ ವಿರುದ್ಧ ಸಾಕ್ಷ್ಯಗಳು ಲಭ್ಯವಾಗಿದೆ.
ಜು.18 ರಂದು ಅಮ್ಶಿಪುರ ಗ್ರಾಮದಲ್ಲಿ ಮೂವರು ಭಯೋತ್ಪಾದಕರನ್ನು ಎನ್ ಕೌಂಟರ್ ಮಾಡಿರುವುದಾಗಿ ಸೇನೆ ಹೇಳಿತ್ತು. ಈ ಪ್ರಕರಣದಲ್ಲಿ ಬಲಿಯಾದವರು ರಜೌರಿ ಜೊಲ್ಲೆಯ ಮೂವರು ವ್ಯಕ್ತಿಗಳಾಗಿದ್ದು, ಸೇನೆ ಅಮ್ಶಿಪುರದಲ್ಲಿ ನಾಪತ್ತೆಯಾಗಿದ್ದಾರೆಂಬ ಸಾಮಾಜಿಕ ಜಾಲತಾಣಗಳ ವರದಿಯನ್ನಾಧರಿಸಿ ಸೇನೆ ನೈತಿಕ ಜವಾಬ್ದಾರಿಯಿಂದ ತನಿಖೆಗೆ ಆದೇಶಿಸಿತ್ತು ಎಂದು ಕರ್ನಲ್ ರಾಜೇಶ್ ಕಾಲಿಯಾ ಹೇಳಿದ್ದಾರೆ.
ನಾಲ್ಕು ವಾರಗಳಲ್ಲಿ ತನಿಖೆ ಮುಕ್ತಾಯಗೊಂಡಿತ್ತು. ಈಗ ಮೇಲ್ನೋಟಕ್ಕೆ ಸೇನೆಯ ವಿಶೇಷಾಧಿಕಾರ ಕಾಯ್ದೆಯಡಿ (ಎಎಫ್ಎಸ್ ಪಿಎ 1990) ನೀಡಲಾಗಿರುವ ಅಧಿಕಾರ ಉಲ್ಲಂಘನೆಯಾಗಿರುವುದು ಕಂಡುಬಂದಿದೆ.
ಎನ್ ಕೌಂಟರ್ ಗೆ ಗುರಿಯಾಗಿದ್ದ ಮೂವರು ಶೋಪಿಯಾನ್ ನಲ್ಲಿ ಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಮೂವರ ಕುಟುಂಬ ಸದಸ್ಯರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರನ್ನೂ ದಾಖಲಿಸಿದ್ದರು.
ಈ ಎನ್ ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಸೇನೆ ಬಿಡುಗಡೆ ಮಾಡಿರುವ ಹೇಳಿಕೆಯ ಪ್ರಕಾರ, ಸುಪ್ರೀಮ್ ಕೋರ್ಟ್ ನಿಂದ ಅನುಮೋದನೆಗೊಂಡ ಸೇನಾ ಮುಖ್ಯಸ್ಥರ ನಿಯಮಗಳು ಈ ಕಾರ್ಯಾಚರಣೆಯಲ್ಲಿ ಉಲ್ಲಂಘನೆಯಾಗಿದೆ.
ಉಲ್ಲಂಘನೆಗೆ ಸಂಬಂಧಿಸಿದಂತೆ ಸೇನಾ ಕಾಯ್ದೆಯಡಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸೇನೆ ತಿಳಿಸಿದೆ. ಎಷ್ಟು ಮಂದಿ ಸೇನಾ ಸಿಬ್ಬಂದಿಯ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂಬ ಬಗ್ಗೆ ಮಾಹಿತಿ ಸ್ಪಷ್ಟವಾಗಿಲ್ಲ.
ಇಮ್ತಿಯಾಜ್ ಅಹ್ಮದ್, ಅಬ್ರಾರ್ ಅಹ್ಮದ್, ಮೊಹಮ್ಮದ್ ಇಬ್ರಾರ್ ಎನ್ ಕೌಂಟರ್ ಗೆ ಗುರಿಯಾದ ಮೂವರು ವ್ಯಕ್ತಿಗಳಾಗಿದ್ದು ಅವರ ಡಿಎನ್ಎ ವರದಿ ಇನ್ನಷ್ಟೇ ಬರಬೇಕಿದೆ. ಅಷ್ಟೇ ಅಲ್ಲದೇ ಅವರಿಗೆ ಭಯೋತ್ಪಾದಕರ ನಂಟು ಇರುವುದರ ಬಗ್ಗೆಯೂ ತನಿಖೆ ನಡೆಯುತ್ತಿದೆ.
Advertisement