ನವದೆಹಲಿ: ಭಾರತೀಯ ಸೇನೆಗೆ ಆಯ್ಕೆಯಾಗಲು ಅಭ್ಯರ್ಥಿಯ ತಂದೆಯ ಮಹತ್ವಾಕಾಂಕ್ಷೆ ಮಾನದಂಡವಾಗುವುದಿಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ.
ಲೆಫ್ಟಿನೆಂಟ್ ಕರ್ನಲ್ ಅವರ ಪುತ್ರನೂ ಆಗಿರುವ, ಸೇನೆಗೆ ಸೇರಿದ್ದ ಆ ಕುಟುಂಬದ ನಾಲ್ಕನೇ ತಲೆಮಾರಿನ ಯುವಕ ಸೇನಾ ಜೀವನಶೈಲಿಗೆ ಹೊಂದಾಣಿಕೆಯಾಗುವುದಿಲ್ಲ ಎಂದು ಭಾರತೀಯ ಸೇನಾ ಅಕಾಡೆಮಿ ( ಐಎಂಎ) ತರಬೇತಿ ಹಂತದಿಂದ ವಾಪಸ್ ಕಳಿಸಿತ್ತು.
ಈತ 2017 ರಲ್ಲಿ ಭಾರತೀಯ ಸೇನೆಗೆ ನಿಯೋಜಿತ ಅಧಿಕಾರಿಯಾಗಿ ಸೇರಲು ಪ್ರೀ-ಕಮಿಷನಿಂಗ್ ಟ್ರೈನಿಂಗ್ ಗಾಗಿ ಐಎಂಎ ಸೇರಿದ್ದ. ಆದರೆ ಸೇನಾ ಜೀವನ ಶೈಲಿಗೆ ಹೊಂದಾಣಿಕೆಯಾಗುವುದಿಲ್ಲವೆಂಬ ಕಾರಣಕ್ಕೆ ಈತನನ್ನು 2019 ರ ನವೆಂಬರ್ ನಲ್ಲಿ ಹಿಂದಕ್ಕೆ ಪಡೆಯಬೇಕೆಂದು ಆದೇಶ ನೀಡಲಾಯಿತು.
ಈ ಕ್ರಮವನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ್ದ ಸೇವೆಯಲ್ಲಿರುವ ಆತನ ತಂದೆ, "ನನ್ನ ಕುಟುಂಬದ ಈ ಹಿಂದಿನ ಮೂರು ತಲೆಮಾರಿನವರೂ ಸೇನಾಧಿಕಾರಿಗಳಾಗಿದ್ದಾರೆ. ಈ ಕಾರಣದಿಂದಾಗಿ ನಾಲ್ಕನೇ ತಲೆಮಾರಿನವನಾದ ನನ್ನ ಮಗ ಕೂಡ ಸೇನಾಧಿಕಾರಿಯಾಗಿ ನಿಯೋಜನೆಗೊಳ್ಳುವುದು ಬಹಳ ಮುಖ್ಯವಾಗುತ್ತದೆ ಆದ ಕಾರಣ ಐಎಂಎಗೆ ತನ್ನ ಆದೇಶವನ್ನು ಹಿಂಪಡೆಯಬೇಕೆಂದು ನಿರ್ದೇಶನ ನೀಡಬೇಕೆಂದು ಮನವಿ ಮಾಡಿದ್ದರು.
ವಿಚಾರಣೆ ನಡೆಸಿದ ನ್ಯಾ.ರಾಜೀವ್ ಶಾಹಿ ಎಂಡ್ಲಾ, ನ್ಯಾ. ಆಶಾ ಮೆನನ್ ಅವರಿದ್ದ ವಿಭಾಗೀಯ ಪೀಠ ಭಾರತೀಯ ಸೇನೆಗೆ ಆಯ್ಕೆಯಾಗಲು ಅಭ್ಯರ್ಥಿಯ ತಂದೆಯ ಮಹತ್ವಾಕಾಂಕ್ಷೆ ಮಾನದಂಡವಾಗುವುದಿಲ್ಲ ಎಂದು ಹೇಳಿದೆ. ಆದರೆ ತನ್ನ ಆಯ್ಕೆ ಕುರಿತು ತನ್ನನ್ನು ಟಾರ್ಗೆಟ್ ಮಾಡಲಗುತ್ತಿದೆ ಎಂದು ಯುವಕ ಹೇಳ್ದಿದಾನೆ.
ತನ್ನ ಪ್ರಾಮಾಣಿಕ ಮತ್ತು ಉತ್ತಮ ಪ್ರಯತ್ನದ ಹೊರತಾಗಿಯೂ ತನ್ನ ಕಂಪನಿ ಕಮಾಂಡರ್ ತನ್ನನ್ನು ಟಾರ್ಗೆಟ್ ಮಾಡುತಿದ್ದರೆಂದು ಯುವಕ ಹೇಳಿದ್ದಾನೆ.
Advertisement