ಲಕ್ನೊ: ಸುದೀರ್ಘ 28 ವರ್ಷಗಳ ಕಾನೂನು ಹೋರಾಟದ ಬಳಿಕ ಬುಧವಾರ ಲಕ್ನೊದ ಸಿಬಿಐ ವಿಶೇಷ ನ್ಯಾಯಾಲಯ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು ನೀಡುತ್ತಿದ್ದು ದೇವಾಲಯ ನಗರಿ ಅಯೋಧ್ಯೆ ಸುತ್ತಮುತ್ತ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಕೋರ್ಟ್ ತೀರ್ಪು ಏನೆಂದು ಹೊರಬರುತ್ತದೆ ಎಂದು ಇಡೀ ದೇಶ ಕಾತರದಿಂದ ಕಾಯುತ್ತಿದೆ.
ಮಾಜಿ ಉಪ ಪ್ರಧಾನಿ ಎಲ್ ಕೆ ಅಡ್ವಾಣಿ, ಉಮಾ ಭಾರತಿ, ಮುರಳಿ ಮನೋಹರ ಜೋಷಿ, ಕಲ್ಯಾಣ್ ಸಿಂಗ್, ವಿನಯ್ ಕತಿಯಾರ್, ಸಾಕ್ಷಿ ಮಹಾರಾಜ್ ಸೇರಿದಂತೆ 32 ಆರೋಪಿಗಳ ಬಗ್ಗೆ ಇಂದು ಬೆಳಗ್ಗೆ 10.30ಕ್ಕೆ ಲಕ್ನೊದ ವಿಶೇಷ ಸಿಬಿಐ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಎಸ್ ಕೆ ಯಾದವ್ ತೀರ್ಪು ನೀಡಲಿದ್ದಾರೆ.
ಆರೋಪಿಗಳಿಗೆ ಇಂದು ನ್ಯಾಯಾಲಯ ಅಪರಾಧಿಗಳೆಂದು ತೀರ್ಪು ನೀಡಿದರೆ ಮೂವರು ಬಿಜೆಪಿ ಸಂಸದರಾದ ಲಲ್ಲು ಸಿಂಗ್, ಬ್ರಿಜ್ ಭೂಷಣ್ ಶರಣ್ ಸಿಂಗ್ ಮತ್ತು ಸಾಕ್ಷಿ ಮಹಾರಾಜ್ ತಮ್ಮ ಸಂಸದ ಸ್ಥಾನವನ್ನು ಕಳೆದುಕೊಳ್ಳಬಹುದು.
ವಿಚಾರಣೆ ಹಂತದಲ್ಲಿ ಸಿಬಿಐ ಆರೋಪಿಗಳ ವಿರುದ್ಧ 600 ದಾಖಲೆಗಳನ್ನು ಸಾಕ್ಷಿಯಾಗಿ ಮತ್ತು 351 ಸಾಕ್ಷಿಗಳನ್ನು ನೀಡಿದೆ. ಆದರೆ ಮುಸಲ್ಮಾನರ ಕಡೆಯಿಂದ ಪ್ರಮುಖ ಕಕ್ಷಿದಾರ ಇಕ್ಬಾಲ್ ಅನ್ಸಾರಿ, ಧ್ವಂಸ ಪ್ರಕರಣದಲ್ಲಿ ಎಲ್ಲಾ ಅಪರಾಧಿಗಳನ್ನು ಖುಲಾಸೆಗೊಳಿಸಿ ಎಂದು ಕೇಳಿಕೊಂಡಿದ್ದರು. ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬಳಿಕ ಹಿಂದೂ-ಮುಸ್ಲಿಮರ ಮಧ್ಯೆ ಮತ್ತೆ ಭಿನ್ನಮತ ಸೃಷ್ಟಿಸುವ ಅಗತ್ಯವಿಲ್ಲ. ದೇಶದಲ್ಲಿ ಕೋಮು ಸೌಹಾರ್ದತೆ ಬೆಳೆಯಲು ಈ ಕೇಸನ್ನು ಖುಲಾಸೆಗೊಳಿಸಬೇಕು ಎಂದು ಅನ್ಸಾರಿ ಹೇಳಿದ್ದರು.
Advertisement