ನವದೆಹಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಹಾಗೂ ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಕುಟುಂಬ ಕೆಲವು ಅಕ್ರಮ ಕಲ್ಲು ಗಣಿಗಾರಿಕೆಯಿಂದ ಬರುವ ಅಕ್ರಮ ನಿಧಿಯ ಪ್ರಯೋಜನ ಪಡೆದುಕೊಂಡಿರುವುದಾಗಿ ಜಾರಿ ನಿರ್ದೇಶನಾಲಯ ಆರೋಪಿಸಿದೆ.
ಪಶ್ಚಿಮ ಬಂಗಾಳ ಪೊಲೀಸ್ ಅಧಿಕಾರಿ ಮತ್ತು ಬಂಕುರಾ ಪೊಲೀಸ್ ಠಾಣೆ ಉಸ್ತುವಾರಿ ಇನ್ಸ್ ಪೆಕ್ಟರ್ ಅಶೋಕ್ ಕುಮಾರ್ ಮಿಶ್ರಾ ಅವರನ್ನು ವಶಕ್ಕೆ ಪಡೆಯಲು ಬುಧವಾರ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಿದ ರಿಮ್ಯಾಂಡ್ ನೋಟ್ ನಲ್ಲಿ ಜಾರಿ ನಿರ್ದೇಶನಾಲಯ ಈ ರೀತಿ ಹೇಳಿದೆ.
ಪ್ರಕರಣವೊಂದರಲ್ಲಿ ಟಿಎಂಸಿ ಯುವ ಘಟಕದ ಮುಖಂಡ ವಿನಯ್ ಮಿಶ್ರಾ ಸಹೋದರ ವಿಕಾಶ್ ಮಿಶ್ರಾ ಅಲ್ಲದೇ, ಪೊಲೀಸ್ ಅಧಿಕಾರಿಯನ್ನು ಏಪ್ರಿಲ್ 3 ರಂದು ಇಡಿ ಬಂಧಿಸಿತ್ತು. ಬುಧವಾರದವರೆಗೂ ನ್ಯಾಯಾಲಯ ಇಡಿ ಕಸ್ಟಡಿಗೆ ಒಪ್ಪಿಸಿತ್ತು. ಮತ್ತೆ ಏಪ್ರಿಲ್ 12ರವರೆಗೂ ಇಡಿ ಕಸ್ಟಡಿ ಅವಧಿಯನ್ನು ವಿಸ್ತರಿಸಲಾಗಿದೆ.
ಈಸ್ಟರ್ನ್ ಕಲ್ಲಿದಲ್ಲು ಗಣಿ ಲಿಮೆಟೆಡ್ ನ ಬಹು ಕೋಟಿ ಕಲ್ಲಿದಲ್ಲು ಹಗರಣಕ್ಕೆ ಸಂಬಂಧಿಸಿದಂತೆ 2020ರ ಸಿಬಿಐ ಎಫ್ ಐರ್ ಅಭ್ಯಸಿಸಿದ ನಂತರ ಹಣ ವರ್ಗಾವಣೆ ನಿಯಂತ್ರಣ ಕಾಯ್ದೆಯಡಿ ಇಡಿ ಪ್ರಕರಣ ದಾಖಲಿಸಿಕೊಂಡಿದೆ. ರಾಜಕೀಯ ಕೃಪಾಕಟಾಕ್ಷದಲ್ಲಿ ಪಶ್ಚಿಮ ಬಂಗಾಳದಲ್ಲಿ ವಿಪರೀತವಾಗಿ ಅಕ್ರಮವಾಗಿ ಕಲ್ಲಿದ್ದಲು ಗಣಿಗಾರಿಕೆ ನಡೆಯುತ್ತಿರುವುದಾಗಿ ಇಡಿ ರಿಮ್ಯಾಂಡ್ ನೋಟ್ ನಲ್ಲಿ ತಿಳಿಸಿದೆ.
ಕೆಲ ದಿನಗಳ ಹಿಂದೆ ಅಭಿಷೇಕ್ ಬ್ಯಾನರ್ಜಿ ಪತ್ನಿ ರುಜಿರಾ ಅವರನ್ನು ಸಿಬಿಐ ಪ್ರಶ್ನಿಸಿದ ನಂತರ ಈ ಪ್ರಕರಣ ರಾಜಕೀಯ ನಂಟು ಪಡೆದುಕೊಂಡಿದೆ.
Advertisement