ನವದೆಹಲಿ: ಶೀನಾ ಬೋರಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಇಂದ್ರಾಣಿ ಮುಖರ್ಜಿ ಸಿಬಿಐ ಗೆ ಪತ್ರ ಬರೆದಿದ್ದು ತಮ್ಮ ಪ್ರತಿಪಾದನೆಯ ಆಧಾರದಲ್ಲಿ ಪ್ರಕರಣದ ತನಿಖೆಯನ್ನು ಮುಂದುವರೆಸಬೇಕೆಂದು ಮನವಿ ಮಾಡಿದ್ದಾರೆ.
ಶೀನಾ ಬೋರಾ ಇನ್ನೂ ಜೀವಂತವಾಗಿದ್ದಾಳೆ, ಆಕೆ ಜಮ್ಮು-ಕಾಶ್ಮೀರದಲ್ಲಿದ್ದಾಳೆ ಎಂದು ಇಂದ್ರಾಣಿ ಸಿಬಿಐ ಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಬೈಕುಲ್ಲಾ ಜೈಲಿನಲ್ಲಿ ತಮ್ಮೊಂದಿಗೆ ಇದ್ದ ಓರ್ವರು ಕಾಶ್ಮೀರದಲ್ಲಿ ಶೀನಾಬೋರಾ ಅವರನ್ನು ಕಂಡಿರುವುದಾಗಿ ತಮಗೆ ಹೇಳಿದ್ದಾರೆ, ಈ ಹಿನ್ನೆಲೆಯಲ್ಲಿ ಶೀನಾ ಇನ್ನೂ ಬದುಕಿ ಉಳಿದಿರುವ ಸಾಧ್ಯತೆಯ ಬಗ್ಗೆ ತನಿಖೆ ನಡೆಸಬೇಕೆಂದು ಸಿಬಿಐ ಗೆ ಇಂದ್ರಾಣಿ ಮನವಿ ಸಲ್ಲಿಸಿದ್ದಾರೆ.
ಆರೋಪಿ ಇಂದ್ರಾಣಿ ಶೀನಾ ಹತ್ಯೆಯಾಗಿಲ್ಲವೆಂದೂ ಆಕೆ 2012ರಿಂದ ಶಿಕ್ಷಣಕ್ಕಾಗಿ ವಿದೇಶಕ್ಕೆ ತೆರಳಿದ್ದಾಳೆಂದೂ ಹೇಳುತ್ತಲೇ ಬಂದಿದ್ದಾರೆ. ಆದರೆ ಇದನ್ನು ಸಾಬೀತುಪಡಿಸುವುದಕ್ಕೆ ಆಕೆಗೆ ಸಾಧ್ಯವಾಗಲಿಲ್ಲ. ಆದರೆ ಇಂದ್ರಾಣಿ ಅವರ ಪರ ವಕೀಲರಾದ ಸಾನ ರಯೀಸ್ ಖಾನ್ ಪತ್ರಕ್ಕೆ ಸಂಬಂಧಿಸಿದಂತೆ ಯಾವುದನ್ನೂ ಖಚಿತಪಡಿಸಲು ನಿರಾಕರಿಸಿದ್ದಾರೆ.
Advertisement