ಲಖನೌ: ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಆದರ್ ಪೂನವಾಲಾ, ಐಸಿಎಂಆರ್ ಮಹಾನಿರ್ದೇಶಕ ಡಾ. ಬಲರಾಮ್ ಭಾರ್ಗವ ಮತ್ತು ಇತರರ ವಿರುದ್ಧ ಲಖನೌ ಮೂಲದ ವ್ಯಕ್ತಿಯೊಬ್ಬರು ಪೋಲಿಸ್ ದೂರು ದಾಖಲಿಸಿದ್ದಾರೆ. ಕೋವಿಶೀಲ್ಡ್ ನ ಒಂದು ಡೋಸ್ ಅನ್ನು ತೆಗೆದುಕೊಂಡ ಹೊರತಾಗಿಯೂ ಕೋವಿಡ್ ವಿರುದ್ಧ ನನ್ನ ದೇಹದಲ್ಲಿ ಯಾವುದೇ ಪ್ರತಿಕಾಯಗಳು ಬೆಳೆದಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ನಗರದ ರುಚಿ ಖಂಡ್ ಪ್ರದೇಶದ ನಿವಾಸಿ ಪ್ರತಾಪ್ ಚಂದ್ರ, ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್, ರಾಷ್ಟ್ರೀಯ ಆರೋಗ್ಯ ಮಿಷನ್ ನಿರ್ದೇಶಕಿ ಅಪರ್ಣ ಉಪಾಧ್ಯಾಯ ಮತ್ತು ಇತರರ ವಿರುದ್ಧ ಪೊಲೀಸ್ ಅಧಿಕಾರಿಯೊಬ್ಬರಿಗೆ ದೂರು ಸಲ್ಲಿಸಿದ್ದಾರೆ.
ಏಪ್ರಿಲ್ 8 ರಂದು ಕೋವಿಶೀಲ್ಡ್ ನ ಮೊದಲ ಡೋಸ್ ತೆಗೆದುಕೊಂಡ ಪ್ರತಾಪ್ ಚಂದ್ರ ತನ್ನಲ್ಲಿ ಪ್ರತಿಕಾಯಗಳ ಅಭಿವೃದ್ಧಿಯಾಗಿಲ್ಲ ಅಲ್ಲದೆ ನನ್ನಲ್ಲಿನ ಪ್ಲೇಟ್ಲೆಟ್ಗಳ ಸಂಖ್ಯೆ ಸಹ ಕುಸಿದಿದೆ ಎಂದು ಆರೋಪಿಸಿದ್ದಾರೆ.
"ನಾನು ಏಪ್ರಿಲ್ 8 ರಂದು ಕೋವಿಶೀಲ್ಡ್ ನ ಮೊದಲ ಡೋಸ್ ತೆಗೆದುಕೊಂಡಿದ್ದೇನೆ. ಇತ್ತೀಚಿನ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ, ಎರಡನೇ ಡೋಸ್ ತೆಗೆದುಕೊಳ್ಳಲು ನಾವು ಕನಿಷ್ಠ 12 ವಾರಗಳವರೆಗೆ ಕಾಯಬೇಕಾಗಿದೆ. ಕುತೂಹಲದಿಂದ, ನನ್ನ ದೇಹದಲ್ಲಿ ಪ್ರತಿಕಾಯಗಳು ಅಭಿವೃದ್ಧಿ ಆಗಿದೆಯೆ ಎಂದು ತಿಳಿಯಲು ನಾನು ಬಯಸಿದೆ. ಮೇ 25 ರಂದು ಹತ್ತಿರದ ಸರ್ಕಾರದಿಂದ ಅನುಮೋದಿತ ಪ್ರಯೋಗಾಲಯದಲ್ಲಿ ನನ್ನನ್ನು ಪರೀಕ್ಷಿಸಿಕೊಂಡಾಗ ನನ್ನಲ್ಲಿ ಪ್ರತಿಕಾಯಗಳು ಅಭಿವೃದ್ಧಿಯಾಗಿಲ್ಲಎಂದು ತಿಳಿದುಬಂದಿದೆ "ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
"ಪರೀಕ್ಷಾ ಫಲಿತಾಂಶದಲ್ಲಿ ನನ್ನಲ್ಲಿ ಕೋವಿಡ್ -19 ವಿರುದ್ಧ ಯಾವುದೇ ಪ್ರತಿಕಾಯ ಅಭಿವೃದ್ಧಿಯಾಗಿಲ್ಲ ಬದಲಿಗೆ, ನನ್ನ ಪ್ಲೇಟ್ಲೆಟ್ ಗಳ ಸಂಖ್ಯೆ 3 ಲಕ್ಷದಿಂದ 1.5 ಲಕ್ಷಕ್ಕೆ ಇಳಿಕೆಯಾಗಿದೆ. ಇದು ನಿರಾಶಾದಾಯಕ ಪರಿಣಾಮವಲ್ಲ ಆದರೆ ನನ್ನ ಜೀವನಕ್ಕೆ ಅಪಾಯಕಾರಿ" ಎಂದು ಅವರು ಹೇಳಿದರು.
ಪೊಲೀಸರು ದೂರು ದಾಖಲಿಸಿದರೂ ಇದುವರೆಗೆ ಎಫ್ಐಆರ್ ದಾಖಲಿಸಿಲ್ಲ. ಈ ವಿಷಯದ ಸೂಕ್ಷ್ಮತೆಯನ್ನು ಪರಿಗಣಿಸಿ ಮುಂದಿನ ಯಾವುದೇ ಕ್ರಮ ಕೈಗೊಳ್ಳುವ ಮೊದಲು ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನೊಂದೆಡೆ ಈ ವಿಷಯದಲ್ಲಿ ಎಫ್ಐಆರ್ ದಾಖಲಿಸದಿದ್ದರೆ ನ್ಯಾಯಾಲಯಕ್ಕೆ ಹೋಗುವುದಾಗಿ ದೂರುದಾರರು ಬೆದರಿಕೆ ಹಾಕಿದ್ದಾರೆ.
ಕೋವಿಶೀಲ್ಡ್ ಜೊತೆಗೆ, ಕೋವ್ಯಾಕ್ಸೀನ್ ಮತ್ತು ಸ್ಪುಟ್ನಿಕ್ ವಿ ಅನ್ನು ಪ್ರಸ್ತುತ ದೇಶದಲ್ಲಿ ಕೋವಿಡ್ ವಿರುದ್ಧ ಲಸಿಕಾ ಅಭಿಯಾನದಲ್ಲಿ ಬಳಸಲಾಗುತ್ತಿದೆ.
Advertisement