ಮೃತ ಕುಟುಂಬಕ್ಕೆ ಉದ್ಯಮಿಯಿಂದ 1 ಕೋಟಿ ರೂ. ಪರಿಹಾರ: ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಕೇರಳ ವ್ಯಕ್ತಿಗೆ ಪುನರ್ಜನ್ಮ!
ಕೊಚ್ಚಿ: ಕಾರು ಅಪಘಾತದ ವೇಳೆ ಮಗುವಿನ ಸಾವಿಗೆ ಕಾರಣನಾಗಿದ್ದ ಚಾಲಕ ಕೇರಳ ಮೂಲದ ಬೆಕ್ಸ್ ಕೃಷ್ಣನ್ ಗೆ ಯುಎಇ ಸುಪ್ರೀಂ ಕೋರ್ಟ್ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಇದೀಗ ಎನ್ಆರ್ಐ ಉದ್ಯಮಿ ಎಂಎ ಯೂಸುಫ್ ಸಹಾಯಹಸ್ತ ಚಾಚಿದ್ದರಿಂದ ಕೃಷ್ಣನ್ ಗೆ ಪುನರ್ಜನ್ಮ ಸಿಕ್ಕಿದೆ.
ತ್ರಿಶೂರ್ ಜಿಲ್ಲೆಯ ಪುಥೆಂಚಿರಾ ಮೂಲದ 45 ವರ್ಷದ ಬೆಕ್ಸ್ ಕೃಷ್ಣನ್ ಕಳೆದ ಏಳು ವರ್ಷಗಳಿಂದ ಅಬುಧಾಬಿಯ ಅಲ್ ವಾತ್ಬಾ ಜೈಲಿನಲ್ಲಿದ್ದಾರೆ. ಬೆಕ್ಸ್ ಕೃಷ್ಣನ್ ಅಬುಧಾಬಿಯ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು 2012ರ ಸೆಪ್ಟೆಂಬರ್ 7ರಂದು ಕೆಲಸಕ್ಕೆ ಸಂಬಂಧಿಸಿದ ಸಭೆಯಲ್ಲಿ ಪಾಲ್ಗೊಳ್ಳಲು ಮುಸಾಫಾಗೆ ಚಾಲನೆ ಮಾಡುತ್ತಿದ್ದಾಗ ಕಾರು ನಿಯಂತ್ರಣ ತಪ್ಪಿ ರಸ್ತೆಬದಿಯಲ್ಲಿ ಆಡುತ್ತಿದ್ದ ಮಕ್ಕಳ ಗುಂಪಿನಲ್ಲಿ ನುಗ್ಗಿತು.
ಅಪಘಾತದಲ್ಲಿ ಸುಡಾನಿ ಬಾಲಕನೊಬ್ಬ ಮೃತಪಟ್ಟಿದ್ದನು. ಅಬುಧಾಬಿ ಪೊಲೀಸರು ಕೃಷ್ಣನ್ ವಿರುದ್ಧ ಕೊಲೆ ಆರೋಪ ಹೊರಿಸಿತ್ತು. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪುರಾವೆಯಾಗಿ ಸಂಗ್ರಹಿಸಿ ಕೋರ್ಟ್ ಗೆ ನೀಡಿದ್ದು ಇದರ ಆಧಾರದ ಮೇಲೆ ನ್ಯಾಯಾಲಯ ಕೃಷ್ಣಗೆ ಮರಣದಂಡನೆ ವಿಧಿಸಿತ್ತು.
ಕೃಷ್ಣನ್ ನನ್ನು ಉಳಿಸುವ ಎಲ್ಲಾ ಪ್ರಯತ್ನಗಳು ವಿಫಲವಾಗಿದ್ದವು. ಕೊನೆಗೆ ಕುಟುಂಬವು ಬಿಜೆಪಿ ಮುಖಂಡ ಸೇತುಮಾಧವನ್ ಸಹಾಯದಿಂದ ಎನ್ಆರ್ಐ ಉದ್ಯಮಿ ಎಂ ಎ ಯೂಸುಫ್ ಅಲಿಯನ್ನು ಸಂಪರ್ಕಿಸಿತು. ಏತನ್ಮಧ್ಯೆ, ಮಗುವನ್ನು ಕಳೆದುಕೊಂಡ ನೋವಿನಿಂದ ಕುಟುಂಬವು ಹಿಂತಿರುಗಿ ಸುಡಾನ್ ವಾಪಸಾಗಿತ್ತು. ಇದು ಮಧ್ಯಸ್ಥಿಕೆ ಪ್ರಯತ್ನಗಳನ್ನು ಅಸಾಧ್ಯಗೊಳಿಸಿತು.
ಆದರೆ ಯೂಸುಫ್ ಅಲಿ ಪಟ್ಟುಬಿಡದಂತೆ ಸುಡಾನ್ನಲ್ಲಿ ಕುಟುಂಬ ಇರುವ ಸ್ಥಳವನ್ನು ಪತ್ತೆ ಮಾಡಿ ಆಫ್ರಿಕಾಗೆ ತೆರಳಿದರು. ಅಲ್ಲಿ ಕೃಷ್ಣನ್ ಅವರನ್ನು ಕ್ಷಮಿಸುವಂತೆ ಸಂತ್ರಸ್ತೆಯ ಕುಟುಂಬವನ್ನು ಮನವೊಲಿಸುವಲ್ಲಿ ಯೂಸುಫ್ ಅಲಿ ಯಶಸ್ವಿಯಾಗಿದ್ದು ಅಲ್ಲದೆ ಅವರನ್ನು ಅಬುಧಾಬಿಗೆ ಕರೆತಂದರು.
2021ರ ಜನವರಿಯಲ್ಲಿ ಕೃಷ್ಣನ್ ಕ್ಷಮಿಸಲು ಸಂತ್ರಸ್ತೆಯ ಕುಟುಂಬ ಒಪ್ಪಿಕೊಂಡಿತು. ನಂತರ ಯೂಸುಫ್ ಅಲಿ 5 ಲಕ್ಷ ದಿರ್ಹಾಮ್(1 ಕೋಟಿ ರೂಪಾಯಿ) ಪರಿಹಾರವಾಗಿ ನೀಡಿದರು. ಕೃಷ್ಣನ್ ಶೀಘ್ರದಲ್ಲೇ ಬಿಡುಗಡೆಯಾಗುವ ನಿರೀಕ್ಷೆಯಲ್ಲಿದ್ದು ಕೇರಳಕ್ಕೆ ಮರಳಲಿದ್ದಾರೆ ಎಂದು ಸಂಬಂಧಿಯೊಬ್ಬರು ತಿಳಿಸಿದ್ದಾರೆ.
ಇನ್ನು ತನಗೆ ಪುನರ್ಜನ್ಮ ನೀಡಿದ ಯೂಸುಫ್ ಅಲಿಯನ್ನು ಭೇಟಿಯಾಗಲು ಕಾಯುತ್ತಿದ್ದೇನೆ. ತನ್ನನ್ನು ಅತಂತ್ರದಿಂದ ರಕ್ಷಿಸಿದ್ದಕ್ಕಾಗಿ ಕೃತಜ್ಞತೆಯನ್ನು ತಿಳಿಸುತ್ತೇನೆ ಎಂದು ಕೃಷ್ಣನ್ ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ