ಗುಜರಾತ್: ಗೋಕಳ್ಳರಿಂದ ಗೋರಕ್ಷಕರ ಹತ್ಯೆ, 10 ಮಂದಿ ಬಂಧನ
ವಲ್ಸದ್: ಗುಜರಾತ್ ನಲ್ಲಿ ಗೋರಕ್ಷರಣೆ ಮಾಡುತ್ತಿದ್ದವರನ್ನು ಗೋವುಗಳ ಕಳ್ಳಸಾಗಣೆ ಮಾಡುತ್ತಿರುವವರು ಹತ್ಯೆ ಮಾಡಿದ್ದು, ಈ ಪ್ರಕರಣದಲ್ಲಿ 10 ಮಂದಿಯನ್ನು ಬಂಧಿಸಲಾಗಿದೆ. ಗುಜರಾತ್ ನ ವಲ್ಸದ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ವಾಹನವನ್ನು ಬಳಸಿ ಹತ್ಯೆ ಮಾಡಲಾಗಿದೆ.
ಪೊಲೀಸರ ಪ್ರಕಾರ ಆರೋಪಿಗಳು ಹೊರ ರಾಜ್ಯದಿಂದ ಬಂದವರಾಗಿದ್ದು, ವಲ್ಸದ್ ನ ಗ್ರಾಮದಿಂದ ಗೋವುಗಳನ್ನು ಖರೀದಿ ಮಾಡಿ ಮಹಾರಾಷ್ಟ್ರದ ಭಿವಾಂಡಿ, ಅಹ್ಮದ್ ನಗರ್, ನಾಸಿಕ್ ಗೆ ಅಕ್ರಮವಾಗಿ ಸಾಗಣೆ ಮಾಡಲಾಗುತ್ತಿತ್ತು.
ಧರಂಪುರ-ವಲ್ಸದ್ ರಸ್ತೆಯಲ್ಲಿ ಶುಕ್ರವಾರದಂದು ಬೆಳಿಗ್ಗೆ ಈ ಘಟನೆ ನಡೆದಿದ್ದು ವಿಹೆಚ್ ಪಿ ಕಾರ್ಯಕರ್ತ ಹಾಗೂ ಗೋರಕ್ಷಕ ಹಾರ್ದಿಕ್ ಕನ್ಸಾರ (29) ಗೋವುಗಳನ್ನು ಸಾಗಣೆ ಮಾಡುತ್ತಿದ್ದ ವಾಹನವನ್ನು ತಡೆಗಟ್ಟಲು ಯತ್ನಿಸಿದ್ದರು, ಈ ವೇಳೆ ಹತ್ಯೆ ನಡೆದಿದೆ ಎಂದು ವಲ್ಸದ್ ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ಗೋರಕ್ಷಕನಿಗೆ ಡಿಕ್ಕಿ ಹೊಡೆದು ಹತ್ಯೆ ಮಾಡಿದ ವಾಹನವನ್ನು ಬೆನ್ನಟ್ಟಿ ಹಿಡಿದಿದ್ದಾರೆ. ವಾಹನವನ್ನು ಅಲ್ಲಿಯೇ ಬಿಟ್ಟು ಚಾಲಕ ಓಡಿ ಹೋಗಿದ್ದು, 11 ಗೋವುಗಳನ್ನು ರಕ್ಷಿಸಲಾಗಿದೆ. ವಾಹನದ ಮಾಲಿಕ ಸೇರಿದಂತೆ ಅಕ್ರಮ ಗೋಸಾಗಣೆಯಲ್ಲಿ ತೊಡಗಿದ್ದ 10 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳನ್ನು ಅಸ್ಗರ್ ಅನ್ಸಾರಿ, ಜಾವೇದ್ ಶೇಖ್, ಜಾಮಿಲ್ ಶೇಖ್, ಖಲೀಲ್ ಶೇಖ್ (ಎಲ್ಲರೂ ಮಹಾರಾಷ್ಟ್ರದ ಭೀವಾಂಡಿಯ ಮೂಲದವರಾಗಿದ್ದಾರೆ, ಜೊತೆಗೆ ಅನ್ಸರ್ ಶೇಖ್, ಹಸನ್ ಅಲಿ, ಅಲಿ ಮುರಾದ್ ಜಮಾಲ್, ಧರ್ಮೇಶ್ ಅಹೀರ್, ಕಮಲೇಶ್ ಆಹೀರ್, ಜಯೇಶ್ ಆಹೀರ್ (ವಲ್ಸದ್ ಜಿಲ್ಲೆಯವರು) ಎಂದು ತಿಳಿದುಬಂದಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ