ನವದೆಹಲಿ: ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಸುಮಾರು ಒಂದು ವಾರದ ಬಳಿಕ ಬಿಜೆಪಿ ಪಕ್ಷದ ಕೇಂದ್ರದ
ವರಿಷ್ಠರು ಇಂದು ಮಹತ್ವದ ಸಭೆಯನ್ನು ಕರೆದಿದ್ದು, ಮುಖ್ಯಮಂತ್ರಿ ಸ್ಥಾನಕ್ಕೆ ನಾಮನಿರ್ದೇಶನ ಮಾಡುವ ಸಾಧ್ಯತೆಯಿದೆ.
ರಾಜ್ಯದಲ್ಲಿನ ನಾಯಕತ್ವದ ವಿಚಾರ ಕುರಿತು ನಿರ್ಧರಿಸಲು ಹಾಲಿ ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್ ಮತ್ತು ಪ್ರಬಲ ನಾಯಕ ಸಚಿವ ಹಿಮಾಂತ ಬಿಸ್ವಾ ಶರ್ಮಾ ಅವರನ್ನು ನವದೆಹಲಿಗೆ ಬರುವಂತೆ ಸೂಚಿಸಲಾಗಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಅವರನ್ನು ಭೇಟಿಯಾಗಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಈಶಾನ್ಯ ರಾಜ್ಯದಲ್ಲಿ ಮತ್ತೆ ಅಧಿಕಾರ ಪಡೆಯುವಲ್ಲಿ ಬಿಜೆಪಿ ಯಶಸ್ಸು ಸಾಧಿಸಿದೆ. ಆದಾಗ್ಯೂ, ಮುಖ್ಯಮಂತ್ರಿ ಆಯ್ಕೆ ವಿಚಾರದಲ್ಲಿ ಸಮಸ್ಯೆ ತಲೆದೋರಿದೆ.
ಸೊನೊವಾಲ್ ಕ್ಲಿನ್ ಇಮೇಜ್ ಹೊಂದಿರುವ ಬುಡುಕಟ್ಟು ಸಮುದಾಯದ ದಕ್ಷ ನಾಯಕ. ಆದಾಗ್ಯೂ, ಉತ್ತಮ ಪಕ್ಷ ಸಂಘಟನೆ
ಕೌಶಲ್ಯ ಹೊಂದಿರುವ ಹಿಮಂತ ಬಿಸ್ವಾ ಶರ್ಮಾ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದು ಸೂಕ್ತ ಎಂದು ಪಕ್ಷದ ಕೆಲವರು
ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಪಕ್ಷದ ಸಂಸದೀಯ ಮಂಡಳಿಯ ಸಭೆಯ ನಂತರ ಅಸ್ಸಾಂನ ನೂತನ ಮುಖ್ಯಮಂತ್ರಿಯನ್ನು ಬಿಜೆಪಿ ಘೋಷಿಸುವ ಸಾಧ್ಯತೆಯಿರುವುದಾಗಿ ಮೂಲಗಳು ತಿಳಿಸಿವೆ.
Advertisement