ನವದೆಹಲಿ: ಉತ್ತರ ಪ್ರದೇಶದ ಗಂಗಾ ನದಿಯಲ್ಲಿ ಶಂಕಿತ ಕೋವಿಡ್ ಶವಗಳು ತೇಲಿ ಬರುತ್ತಿರುವುದು ಅಮಾನವೀಯ ಮತ್ತು ಅಪರಾಧ ಎಂದಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು, ಈ ಬಗ್ಗೆ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇ ಎಂದು ಗುರುವಾರ ಒತ್ತಾಯಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವುದು ಅಮಾನವೀಯ ಮತ್ತು ಅಪರಾಧ. ಜನ ಊಹಿಸಲಾಗದಷ್ಟು ತೊಂದರೆ ಅನುಭವಿಸುತ್ತಿರುವಾಗ ಉತ್ತರ ಪ್ರದೇಶ ಸರ್ಕಾರ ಮಾತ್ರ ತನ್ನ ಗೌರವ ಹೆಚ್ಚಿಸಿಕೊಳ್ಳುತ್ತಿರುವುದರಲ್ಲಿ ನಿರತವಾಗಿದೆ ಎಂದು ಪ್ರಿಯಾಂಕಾ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
"ಈ ಘಟನೆಗಳ ಬಗ್ಗೆ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತಕ್ಷಣ ನ್ಯಾಯಾಂಗ ತನಿಖೆ ನಡೆಸಬೇಕು" ಎಂದು ಕಾಂಗ್ರೆಸ್ ನಾಯಕಿ ಟ್ವೀಟರ್ ಮೂಲಕ ಆಗ್ರಹಿಸಿದ್ದಾರೆ.
ಬಲ್ಲಿಯಾದ ಗಂಗಾನದಿಯಲ್ಲಿ ಮತ್ತು ಉತ್ತರ ಪ್ರದೇಶದ ಇತರ ಸ್ಥಳಗಳಲ್ಲಿ ಹಾಗೂ ಬಿಹಾರದಲ್ಲಿ ಶಂಕಿತ ಕೋವಿಡ್ ಶವಗಳು ತೇಲಿ ಬರುತ್ತಿವೆ ಎಂಬ ವರದಿಗಳನ್ನು ಉಲ್ಲೇಖಿಸಿ ಪ್ರಿಯಾಂಕಾ ಗಾಂಧಿ ಟ್ವೀಟ್ ಮಾಡಿದ್ದು,
"ಬಲ್ಲಿಯಾ ಮತ್ತು ಗಾಜಿಪುರದ ಗಂಗಾದಲ್ಲಿ ಶವಗಳು ತೇಲುತ್ತಿವೆ. ಉನ್ನಾವೊದಲ್ಲಿ ನದಿಯ ದಡದಲ್ಲಿ ಸಾಮೂಹಿಕ ಸಮಾಧಿ ಮಾಡುತ್ತಿರುವ ಬಗ್ಗೆ ವರದಿಗಳು ಬರುತ್ತಿವೆ. ಲಖನೌ, ಗೋರಖ್ಪುರ, ಝಾನ್ಸಿ ಮತ್ತು ಕಾನ್ಪುರದಂತಹ ನಗರಗಳಿಂದ ಅಧಿಕೃತ ಸಾವಿನ ಸಂಖ್ಯೆಗಳು ವರದಿಯಾಗಿಲ್ಲ" ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತೊಂದು ಟ್ವೀಟ್ ನಲ್ಲಿ ಹೇಳಿದ್ದಾರೆ.
Advertisement