'ಬಿಜೆಪಿ ಸಿಎಂಗಳಿಗೆ ಮಾತ್ರ ಮಾತನಾಡಲು ಅವಕಾಶ': ಪ್ರಧಾನಿ ಮೋದಿ ಕೋವಿಡ್ ಸಭೆ 'ಸೂಪರ್ ಫ್ಲಾಪ್' ಎಂದ ದೀದಿ
ಕೊಲ್ಕತ್ತಾ: ದೇಶದಲ್ಲಿ ಕೊರೋನಾ ಸ್ಥಿತಿಗತಿ ಮತ್ತು ಅದನ್ನು ನಿಯಂತ್ರಿಸುವ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಕರೆದ 10 ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಜಿಲ್ಲಾಧಿಕಾರಿಗಳ ಸಭೆ 'ಸೂಪರ್ ಫ್ಲಾಪ್' ಎಂದಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಸಭೆಯಲ್ಲಿ ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಮಾತ್ರ ಮಾತನಾಡಲು ಅವಕಾಶ ನೀಡಲಾಗಿದೆ ಎಂದು ದೂರಿದ್ದಾರೆ.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ದೀದಿ, ಪ್ರಧಾನ ಮಂತ್ರಿಗಳ ಸಭೆ ಒಂದು "ಸೂಪರ್ ಫ್ಲಾಪ್" ಆಗಿತ್ತು, ನಾನು ಸೇರಿದಂತೆ ಅನೇಕ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಮಾತನಾಡಲು ಅವಕಾಶ ನೀಡಿಲ್ಲ. ಇದು ಮುಖ್ಯಮಂತ್ರಿಗಳಿಗೆ ಮಾಡಿದ ಅವಮಾನ ಎಂದಿದ್ದಾರೆ.
ಎಲ್ಲಾ ರಾಜ್ಯಗಳಲ್ಲೂ ಸಾಕಷ್ಟು ಸಮಸ್ಯೆಗಳಿವೆ. ಆದರೆ ಕೊರೋನಾ ಸಭೆಯಲ್ಲಿ ಪ್ರಧಾನಿ ಮೋದಿ ನಮ್ಮನ್ನು ಔಷಧಿ, ಲಸಿಕೆ, ರೆಮಿಡಿಸಿವಿರ್, ಆಮ್ಲಜನಕದ ಪರಿಸ್ಥಿತಿ ಮತ್ತು ಅಗತ್ಯಗಳ ಬಗ್ಗೆ ಕೇಳಲಿಲ್ಲ. ಎಲ್ಲಾ ರಾಜ್ಯಗಳ ಸಿಎಂಗಳನ್ನೂ ವಿಡಿಯೋ ಕಾನ್ಫರೆನ್ಸ್ ಸಭೆಗೆ ಅಧಿಕೃತವಾಗಿ ಆಹ್ವಾನಿಸಲಾಗಿತ್ತಾದರೂ, ಯಾರಿಗೂ ಮಾತನಾಡಲು ಅವಕಾಶವನ್ನೇ ನೀಡಿಲ್ಲ. ಈ ಸಭೆಯಲ್ಲಿ ನಾವು ಒಂದು ರಾಜ್ಯದ ಮುಖ್ಯಮಂತ್ರಿಗಳಾಗಿದ್ದರೂ ಅವಮಾನ ಅನುಭವಿಸಿದ್ದೇವೆ" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಭೆಯಲ್ಲಿ ಬಿಜೆಪಿ ಆಡಳಿತದ ರಾಜ್ಯಗಳ ಸಿಎಂಗಳಿಗೆ ಮಾತ್ರ ಮಾತನಾಡಲು ಅವಕಾಶವಿದೆ ಎಂದ ಮಮತಾ ಬ್ಯಾನರ್ಜಿ, ಇತರರನ್ನು "ಕೈಗೊಂಬೆಗಳಾಗಿ ಮಾಡಲಾಗಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ