ಪ್ರಧಾನಿ ಮೋದಿಗೆ ದೇಶವೇ ಮೊದಲು...ಕೃಷಿ ಕಾನೂನು ರದ್ದು ಮಾಡಿದ್ದು, ಚುನಾವಣೆಗಾಗಿ ಅಲ್ಲ: ಸಾಕ್ಷಿ ಮಹಾರಾಜ್
ಲಖನೌ: ಚುನಾವಣೆ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿಯವರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಿಲ್ಲ.. ಅವರಿಗೆ ದೇಶವೇ ಮೊದಲು ಎಂದು ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಹೇಳಿದ್ದಾರೆ.
ಎಎನ್ ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಸಾಕ್ಷಿ ಮಹಾರಾಜ್ ಅವರು, ‘ಕೃಷಿ ಕಾಯ್ದೆಗಳಿಗೆ ಚುನಾವಣೆಗಳೊಂದಿಗೆ ಯಾವುದೇ ಸಂಬಂಧವಿಲ್ಲ. ಮೋದಿಯವರಿಗೆ ದೇಶವೇ ಮೊದಲು. ಕಾಯ್ದೆಗಳು ಬರಬಹುದು, ರದ್ದುಗೊಳಿಸಬಹುದು, ಮರು ರೂಪಿಸಬಹುದು. ಕಾಯ್ದೆಗಳಿಗಿಂತಲೂ ದೇಶವನ್ನೇ ಮೊದಲ ಆಯ್ಕೆಯನ್ನಾಗಿ ಮಾಡಿ ತಪ್ಪು ಉದ್ದೇಶಗಳಿಗೆ ಹೊಡೆತ ನೀಡಿದ್ದಕ್ಕಾಗಿ ಪ್ರಧಾನಿಯವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ’ ಎಂದು ಅವರು ಹೇಳಿದ್ದಾರೆ.
ಕೇಂದ್ರ ಸರ್ಕಾರವು ಕಳೆದ ವರ್ಷ ರೂಪಿಸಿದ್ದ ಮೂರು ಕೃಷಿ ಕಾಯ್ದೆಗಳನ್ನು ರೈತರ ಭಾರಿ ವಿರೋಧದ ಕಾರಣ ರದ್ದುಪಡಿಸುವುದಾಗಿ ಮೋದಿ ಅವರು ಶುಕ್ರವಾರ ಘೋಷಿಸಿದ್ದರು. ಕಾಯ್ದೆಗಳ ಬಗ್ಗೆ ಒಂದು ವರ್ಗದ ರೈತರಿಗೆ ಮನವರಿಕೆ ಮಾಡಿಕೊಡುವಲ್ಲಿ ವಿಫಲರಾಗಿರುವುದಕ್ಕೆ ದೇಶದ ಜನತೆ ಬಳಿ ಕ್ಷಮೆಯನ್ನೂ ಯಾಚಿಸಿದ್ದರು. ಆದರೆ ಪ್ರಧಾನಿ ಮೋದಿ ನಡೆಯನ್ನು ಟೀಕಿಸಿದ್ದ ವಿಪಕ್ಷಗಳು ಚುನಾವಣೆ ಹಿನ್ನಲೆಯಲ್ಲಿ ಕೃಷಿ ಕಾನೂನು ಹಿಂಪಡೆದಿದ್ದಾರೆ ಎಂದು ಟೀಕಿಸಿದ್ದವು.

