ಪಾಲ್ಘರ್: ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಉದ್ಯಮಿಯೊಬ್ಬರು ಬಿಟ್ಕಾಯಿನ್ ವ್ಯಾಪಾರದಲ್ಲಿ 10 ಲಕ್ಷ ರೂಪಾಯಿ ಕಳೆದುಕೊಂಡ ನಂತರ ತನ್ನ ಹಣವನ್ನು ದರೋಡೆ ಮಾಡಿರುವುದಾಗಿ ಸುಳ್ಳು ಹೇಳಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ದಿನಸಿ ಮತ್ತು ಇತರ ಅಗತ್ಯ ವಸ್ತುಗಳ ಪೂರೈಕೆ ವ್ಯಾಪಾರಿಯಾಗಿರುವ ಸುಮಂತ್ ಲಿಗಾಯತ್ ಅವರು ಮುಂದಿನ ತಿಂಗಳು ನಡೆಯಲಿರುವ ಮಗಳ ಮದುವೆಗಾಗಿ 10 ಲಕ್ಷ ರೂಪಾಯಿಗಳನ್ನು ಉಳಿಸಿದ್ದರು. ಆದರೆ ಆ ಹಣ ಬಿಟ್ಕಾಯಿನ್ ವ್ಯಾಪಾರದಲ್ಲಿ ಕಳೆದುಕೊಂಡಿದ್ದು, ಕುಟುಂಬ ಆತಂಕದಲ್ಲಿದೆ ಎಂದು ವಸೈ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಬಿಟ್ಕಾಯಿನ್ ದಂಧೆಯಲ್ಲಿ ಹಣ ಕಳೆದುಕೊಂಡ ನಂತರ ಸುಮಂತ್ ಲಿಗಾಯತ್ ಅವರು ವಸಾಯಿ ಪೊಲೀಸ್ ಠಾಣೆಗೆ ತೆರಳಿ, ಸೋಮವಾರ ಮಧ್ಯಾಹ್ನ ಅಪರಿಚಿತ ವ್ಯಕ್ತಿಯೊಬ್ಬರು ತನ್ನ ಹಣವನ್ನು ದೋಚಿಕೊಂಡು ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದಾನೆ ಎಂದು ದೂರು ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ದರೋಡೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ದೂರಿನಲ್ಲಿ ಯಾವುದೇ ಸತ್ಯಾಂಶವಿಲ್ಲ. ಇದು ಕಟ್ಟು ಕಥೆ ಎಂದು ಅರಿತುಕೊಂಡ ಪೊಲೀಸರು ಉದ್ಯಮಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.
Advertisement