ಚಂಡೀಗಢ: ಸಿಎಂ ಪದವಿಯಿಂದ ನಿರ್ಗಮಿಸುತ್ತಿದ್ದಂತೆಯೇ ಅಮರಿಂದರ್ ಸಿಂಗ್ ಹಾಗೂ ಕಾಂಗ್ರೆಸ್ ನಾಯಕರ ನಡುವಿನ ಆರೋಪ-ಪ್ರತ್ಯಾರೋಪಗಳು, ಹೇಳಿಕೆ ಪ್ರತಿಕ್ರಿಯೆಗಳ ಸರಣಿ ಮುಂದುವರೆದಿದೆ.
ಪಂಜಾಬ್ ನ ಭದ್ರತೆಯ ವಿಷಯವಾಗಿ ಹೇಳಿಕೆ ನೀಡಿದ್ದ ಅಮರಿಂದರ್ ಸಿಂಗ್ ಗೆ ಪಂಜಾಬ್ ನ ಉಪಮುಖ್ಯಮಂತ್ರಿ ಸುಖ್ಜಿಂದರ್ ಸಿಂಗ್ ರಾಂಧವಾ, ರಾಜ್ಯ ಸುರಕ್ಷಿತವಾದ ಕೈಗಳಲ್ಲಿದೆ. ಭಯ ಸೃಷ್ಟಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಪಂಜಾಬ್ ನ ಭದ್ರತೆ ಹಾಗು ಶಾಂತಿಗೆ ಸಂಬಂಧಿಸಿದಂತೆ ಪಟ್ಟಭದ್ರ ಹಿತಾಸಕ್ತಿಗಳು ಎಚ್ಚರಿಕೆಯ ನರೇಟೀವ್ ನ್ನು ಸೃಷ್ಟಿಸುತ್ತಿರುವುದರ ಬಗ್ಗೆ ಡಿಸಿಎಂ ಆಕ್ಷೇಪ ವ್ಯಕ್ತಪಡಿಸಿರುವ ಡಿಸಿಎಂ, ಇಂತಹ ಯಾವುದೇ ಯತ್ನದ ವಿರುದ್ಧ ಎಚ್ಚರಿಕೆ ನೀಡಿದ್ದಾರೆ.
ಅಮರಿಂದರ್ ಸಿಂಗ್ ಎನ್ಎಸ್ಎ ಅಜಿತ್ ದೋವಲ್ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ನಡೆಸಿದ ಸಭೆಯ ಬಗ್ಗೆ ಉಲ್ಲೇಖಿಸಿರುವ ಅವರು, ಈ ಹಿಂದೆ ರಾಜ್ಯಕ್ಕೆ ಸಂಬಂಧಿಸಿದಂತೆ ಇಂತಹ ಸಭೆಗಳನ್ನೇಕೆ ನಡೆಸಿರಲಿಲ್ಲ ಎಂದು ಪ್ರಶ್ನಿಸಿದ್ದಾರೆ.
ಪಂಜಾಬ್ ನಲ್ಲಿ ದುರಾಡಳಿತ ರಾಜ್ಯದಲ್ಲಿ ಸಮಸ್ಯೆಗಳನ್ನು ತಂದಿಡುವುದಕ್ಕೆ ಪಾಕಿಸ್ತಾನಕ್ಕೆ ಅವಕಾಶ ನೀಡಲಿದೆ. ತಾವು ಎನ್ಎಸ್ಎ ಅಜಿತ್ ದೋವಲ್ ಅವರೊಂದಿಗೆ ಚರ್ಚಿಸಿದ ವಿಷಯ ಇದೇ ಕೇಂದ್ರಿತವಾಗಿತ್ತು ಎಂದು ಅಮರಿಂದರ್ ಸಿಂಗ್ ಹೇಳಿದ್ದರು.
ಪಂಜಾಬ್ ನಲ್ಲಿ ಪಾಕಿಸ್ತಾನದ ಅಪಾಯವನ್ನು ಅಲ್ಲಗಳೆಯುತ್ತಿರುವವರ ಬಗ್ಗೆ ಮಾತನಾಡಿದ್ದ ಅಮರಿಂದರ್ ಸಿಂಗ್, ಅಪಾಯವನ್ನು ಅಲ್ಲಗಳೆಯುವ ಮೂಲಕ ಇಂತಹ ವ್ಯಕ್ತಿಗಳು ಭಾರತ ವಿರೋಧಿ ಪಡೆಗಳ ಕೈಲಿನ ಸೂತ್ರದ ಬೊಂಬೆಗಳಾಗಿದ್ದಾರೆ ಎಂದು ಆರೋಪಿಸಿದ್ದರು.
Advertisement