ಚೆನ್ನೈ: ಮಹಿಳೆಯೊಬ್ಬರಿಂದ ಆರು ಚಿನ್ನದ ಸರಗಳನ್ನು ಕಸಿದುಕೊಂಡು ಗಾಳಿಯಲ್ಲಿ ಗುಂಡು ಹಾರಿಸಿದ ಆರೋಪಿಗಳಲ್ಲಿ ಒಬ್ಬನನ್ನು ತಮಿಳುನಾಡು ಪೊಲೀಸರು ಗುಂಡಿಕ್ಕೆ ಹತ್ಯೆ ಮಾಡಿರುವ ಘಟನೆ ಸೋಮವಾರ ಮಧ್ಯಾಹ್ನ ಕಾಂಚೀಪುರಂನಲ್ಲಿ ನಡೆದಿದೆ.
ಶ್ರೀಪೆರಂಬದೂರಿನ ಮೇವಲೂರುಕುಪ್ಪಂ ಗ್ರಾಮದ ಪಾದೂರು ರಸ್ತೆ ಬಳಿಯ ಖಾಲಿ ಜಾಗದಲ್ಲಿ ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಗುಂಡು ಹಾರಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮತ್ತೊಬ್ಬ ಆರೋಪಿಯನ್ನು ಸ್ಥಳೀಯ ಪೊಲೀಸರು ಇಂದು ಬೆಳಗ್ಗೆ ಬಂಧಿಸಿದ್ದಾರೆ.
ಸ್ಥಳಕ್ಕೆ ಪೊಲೀಸ್ ಮಹಾ ನಿರ್ದೇಶಕ ಸತ್ಯಪ್ರಿಯ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಸುಧಾಕರ್ ಅವರು ಭೇಟಿ ಪರಿಶೀಲಿಸಿದರು.
ಮೃತದೇಹವನ್ನು ಕಾಂಚೀಪುರಂ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಲಾಗಿದೆ.
ಭಾನುವಾರ ಸಂಜೆ ಶ್ರೀಪೆರಂಬದೂರು ಟೋಲ್ ಗೇಟ್ ಬಳಿ ಪಿಸ್ತೂಲ್ ಹೊಂದಿದ್ದ ಇಬ್ಬರು ವ್ಯಕ್ತಿಗಳು ಬಸ್ ಗಾಗಿ ಕಾಯುತ್ತಿದ್ದ ಇಂದಿರಾ ಎಂಬ ಮಹಿಳೆಯಿಂದ ಆರು ಚಿನ್ನದ ಸರಗಳನ್ನು ಕಸಿದುಕೊಂಡು ಪರಾರಿಯಾಗಿದ್ದರು.
ಮಹಿಳೆಯ ಕೂಗು ಕೇಳಿಸಿಕೊಂಡ ದಾರಿಹೋಕರು ಬೈಕ್ಗಳಲ್ಲಿ ದುಷ್ಕರ್ಮಿಗಳನ್ನು ಬೆನ್ನಟ್ಟಲು ಪ್ರಯತ್ನಿಸಿದರು. ಆದರೆ ಆರೋಪಿಗಳು ಗಾಳಿಯಲ್ಲಿ ಗುಂಡು ಹಾರಿಸಿದರು ಮತ್ತು ಯಾರಾದರೂ ತಮ್ಮ ಹಿಂಬಾಲಿಸಿದರೆ ಅವರ ಮೇಲೆ ಗುಂಡು ಹಾರಿಸುವುದಾಗಿ ಬೆದರಿಕೆ ಹಾಕಿದರು.
ಆರೋಪಿಗಳ ಪತ್ತೆಗೆ ಬಲೆ ಬೀಸಿದ ಪೊಲೀಸರು, ಓರ್ವ ಆರೋಪಿಯನ್ನು ಬಂಧಿಸಿದ್ದು, ಮತ್ತೊಬ್ಬನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
Advertisement