ಬಿಹಾರ ಮೂಲದ ಬೀದಿ ವ್ಯಾಪಾರಿಯನ್ನು ಹತ್ಯೆ ಮಾಡಿದ ಉಗ್ರ ಸೇರಿ ಶೋಪಿಯಾನ್ ನಲ್ಲಿ 3 ಟಿಆರ್ ಎಫ್ ಉಗ್ರರ ಹತ್ಯೆ: ಪೊಲೀಸರು

ಕಳೆದ ವಾರ ಶ್ರೀನಗರದಲ್ಲಿ ಬಿಹಾರ ಮೂಲದ ಬೀದಿ ವ್ಯಾಪಾರಿ ವೀರೇಂದ್ರ ಪಾಸ್ವಾನ್ ಹತ್ಯೆಯಲ್ಲಿ ಭಾಗಿಯಾಗಿದ್ದ ಉಗ್ರ ಸೇರಿದಂತೆ ಮೂವರು ಟಿಆರ್ ಎಫ್ ಉಗ್ರರನ್ನು ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಶೋಪಿಯಾನ್: ಕಳೆದ ವಾರ ಶ್ರೀನಗರದಲ್ಲಿ ಬಿಹಾರ ಮೂಲದ ಬೀದಿ ವ್ಯಾಪಾರಿ ವೀರೇಂದ್ರ ಪಾಸ್ವಾನ್ ಹತ್ಯೆಯಲ್ಲಿ ಭಾಗಿಯಾಗಿದ್ದ ಉಗ್ರ ಸೇರಿದಂತೆ ಮೂವರು ಟಿಆರ್ ಎಫ್ ಉಗ್ರರನ್ನು ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಉಗ್ರರ ಇರುವಿಕೆ ಬಗ್ಗೆ ನಿಖರ ಮಾಹಿತಿ ಪಡೆದ ನಂತರ ಪೊಲೀಸರು, ಸಿಆರ್ ಪಿಎಫ್ ಮತ್ತು ಸೇನಾಪಡೆ ಶೋಪಿಯಾನ್ ನ ಟುಲ್ರನ್ ಪ್ರದೇಶದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಉಗ್ರರ ಬಳಿ ಪೊಲೀಸರು ಪದೇ ಪದೇ ಶರಣಾಗುವಂತೆ ಕೇಳಿಕೊಂಡಿದ್ದರು. ಆದರೆ ಅವರು ಗುಂಡಿನ ಸುರಿಮಳೆಗೈಯಲು ಆರಂಭಿಸಿದ್ದರಿಂದ ಭದ್ರತಾ ಪಡೆ ಗುಂಡು ಹಾರಿಸಿ ಮೂವರು ಉಗ್ರರನ್ನು ಹೊಡೆದುರುಳಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ಉಗ್ರರಲ್ಲಿ ಒಬ್ಬನನ್ನು ಗಂದೆರ್ಬಲ್ ನ ಮುಕ್ತರ್ ಶಾ ಎಂದು ಗುರುತಿಸಲಾಗಿದೆ. ಬಿಹಾರ ಮೂಲದ ಬೀದಿ ಬದಿ ವ್ಯಾಪಾರಿ ವೀರೇಂದರ್ ಪಾಸ್ವಾನ್ ನನ್ನು ಲಾಲ್ ಬಜಾರ್ ಪ್ರದೇಶದಲ್ಲಿ ಕಳೆದ ಅಕ್ಟೋಬರ್ 5ರಂದು ಹತ್ಯೆ ಮಾಡಿದ ನಂತರ ಈತನನ್ನು ಶೋಪಿಯಾನ್ ಗೆ ವರ್ಗಾಯಿಸಲಾಗಿತ್ತು ಎಂದು ಕಾಶ್ಮೀರ ವಲಯ ಐಜಿಪಿ ವಿಜಯ್ ಕುಮಾರ್ ತಿಳಿಸಿದ್ದಾರೆ.

ಪಾಸ್ವಾನ್ ಮತ್ತು ಪ್ರಮುಖ ಕಾಶ್ಮೀರಿ ಪಂಡಿತ್ ಉದ್ಯಮಿ ಎಂ ಎಲ್ ಬಿಂದ್ರೂ ಮತ್ತು ಸುಮೋ ಚಾಲಕ ಮೊಹಮ್ಮದ್ ಶಾಫಿ ಲೋನ್ ಅವರನ್ನು ಅಕ್ಟೋಬರ್ 5 ರಂದು ಮೂರು ಪ್ರತ್ಯೇಕ ಸ್ಥಳಗಳಲ್ಲಿ ಉಗ್ರರು ಕೊಂದು ಹಾಕಿದ್ದರು. ಪಾಸ್ವಾನ್ ಮತ್ತು ಬಿಂದ್ರೂ ಅವರನ್ನು ಶ್ರೀನಗರದಲ್ಲಿ ಗುಂಡಿಕ್ಕಿ ಕೊಂದರೆ, ಲೋನ್ ಬಂಡಿಪೋರಾದಲ್ಲಿ ಕೊಲ್ಲಲ್ಪಟ್ಟರು.

ಸುಮೋ ಚಾಲಕನ ಹತ್ಯೆಯಲ್ಲಿ ಭಾಗಿಯಾಗಿದ್ದ ಟಿಆರ್‌ಎಫ್ ಉಗ್ರ ಇಮ್ತಿಯಾಜ್ ಅಹ್ಮದ್ ದಾರ್ ನನ್ನು ಕೊಂದಿರುವುದಾಗಿ ಪೊಲೀಸರು ನಿನ್ನೆ ತಿಳಿಸಿದ್ದಾರೆ. ಆದರೆ, ಮೃತನ ಕುಟುಂಬ ಆತನನ್ನು ನಾಗರಿಕ ಎಂದು ಆರೋಪಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com