ಶ್ರೀನಗರ: ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸುವಂತೆ ಕೋರುತ್ತಿರುವ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಖ್ ಅಬ್ದುಲ್ಲಾ ವಿರುದ್ಧ ಸೋಮವಾರ ವಾಗ್ದಾಳಿ ನಡೆಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ದೇಶದಲ್ಲಿನ ಅತ್ಯಂತ ಪ್ರಮುಖವಾದ ಪ್ರದೇಶವಾಗಿ ಇದನ್ನು ಅಭಿವೃದ್ಧಿಪಡಿಸಲು ಜಮ್ಮು-ಕಾಶ್ಮೀರದ ಯುವಕರೊಂದಿಗೆ ಸರ್ಕಾರ ಮಾತನಾಡಲು ಬಯಸುತ್ತದೆ ಎಂದಿದ್ದಾರೆ.
2019 ಆಗಸ್ಟ್ ನಲ್ಲಿ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬಳಿಕ ಇದೇ ಮೊದಲ ಬಾರಿಗೆ ಕೇಂದ್ರಾಡಳಿತ ಪ್ರದೇಶಕ್ಕೆ ಭೇಟಿ ನೀಡಿರುವ ಗೃಹ ಸಚಿವರು, ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ, ಶಂಕು ಸ್ಥಾಪನೆ ನೆರವೇರಿಸಿದರು.
ಸರ್ಕಾರ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸುವಂತೆ ಫಾರೂಖ್ ಅಬ್ದುಲ್ಲಾ ಸಲಹೆ ನೀಡಿರುವುದನ್ನು ನ್ಯೂಸ್ ಪೇಪರ್ ನಲ್ಲಿ ಓದಿದ್ದೇನೆ. ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಹೊಂದಿದ್ದಾರೆ. ಆದರೆ, ನಾವು ಕಾಶ್ಮೀರಿ ಯುವ ಜನಾಂಗದೊಂದಿಗೆ ಮಾತುಕತೆ ನಡೆಸುವುದಾಗಿ ಎಸ್ ಕೆಐಸಿಸಿಯಲ್ಲಿ ನಡೆದ ಸಮಾರಂಭದಲ್ಲಿ ಅಮಿತ್ ಶಾ ಹೇಳಿದರು.
ಅಭಿವೃದ್ಧಿ ಹಾದಿಗೆ ತರಲು ಜಮ್ಮು-ಕಾಶ್ಮೀರವನ್ನು ಹೊಸದಾಗಿ ಕೇಂದ್ರಾಡಳಿತ ಪ್ರದೇಶವಾಗಿ ವಿಭಜಿಸುವ ಉದ್ದೇಶದಿಂದ ಸಂವಿಧಾನದ 370ನೇ ವಿಧಿ ರದ್ದುಗೊಳಿಸಲಾಗಿದೆ ಎಂದು ಅವರು ತಿಳಿಸಿದರು. ಬೆಮಿನಾದಲ್ಲಿ ಸುಮಾರು 115 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ 500 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನು ಉದ್ಘಾಟಿಸಿದ ಅಮಿತ್ ಶಾ, ಹಂದ್ವಾರದಲ್ಲಿ ಮೆಡಿಕಲ್ ಕಾಲೇಜ್ ಸ್ಥಾಪನೆ, 4 ಸಾವಿರ ಕೋಟಿ ರೂ. ಮೊತ್ತದ ರಸ್ತೆ ಯೋಜನೆ ಸೇರಿದಂತೆ ಅನೇಕ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.
ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸುವಂತೆ ಸಲಹೆ ನೀಡುವವರು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಪಾಕಿಸ್ತಾನ ಏನು ಮಾಡಿದೆ ಎಂಬುದನ್ನು ಕೇಳಲಿ, ಈ ಭಾಗ ಹಾಗೂ ಪಿಒಕೆ ನಡುವಣ ಅಭಿವೃದ್ಧಿಯನ್ನು ಹೋಲಿಕೆ ಮಾಡಲಿ, ಅವರಿಗೆ ವಿದ್ಯುತ್ , ರಸ್ತೆ, ಆರೋಗ್ಯ ಸೇವೆ, ಶೌಚಾಲಯವಿದೆಯೇ? ಏನು ಇಲ್ಲ. ಕಾಶ್ಮೀರಿಗಳು ಕೂಡಾ ದೇಶದ ಇತರ ಭಾಗಗಳಲ್ಲಿ ಹೊಂದಿರುವ ಹಕ್ಕುಗಳನ್ನು ಹೊಂದಿದ್ದಾರೆ ಎಂದು ಅಮಿತ್ ಶಾ ತಿಳಿಸಿದರು.
Advertisement