ಮಮತಾರಿಂದ ದೇವೇಗೌಡರವರೆಗೆ: ಸೆ. 25 ರಂದು ಹಲವು ನಾಯಕರನ್ನು ಒಟ್ಟುಗೂಡಿಸಲಿದ್ದಾರೆ ಚೌತಾಲ

ತೃತೀಯ ರಂಗಕ್ಕಾಗಿ ಐಎನ್‌ಎಲ್‌ಡಿಯ ಓಂ ಪ್ರಕಾಶ್ ಚೌತಾಲ ಅವರು, ಎಸ್‌ಪಿ ಹಿರಿಯ ನಾಯಕ ಮುಲಾಯಂ ಸಿಂಗ್ ಯಾದವ್, ಬಿಹಾರ ಮುಖ್ಯಮಂತ್ರಿ ಮತ್ತು ಜೆಡಿಯು ನಾಯಕ ನಿತೀಶ್ ಕುಮಾರ್, ಮಾಜಿ ಪ್ರಧಾನಿ..
ಓಂ ಪ್ರಕಾಶ್ ಚೌತಾಲ
ಓಂ ಪ್ರಕಾಶ್ ಚೌತಾಲ

ನವದೆಹಲಿ: ತೃತೀಯ ರಂಗಕ್ಕಾಗಿ ಐಎನ್‌ಎಲ್‌ಡಿಯ ಓಂ ಪ್ರಕಾಶ್ ಚೌತಾಲ ಅವರು, ಎಸ್‌ಪಿ ಹಿರಿಯ ನಾಯಕ ಮುಲಾಯಂ ಸಿಂಗ್ ಯಾದವ್, ಬಿಹಾರ ಮುಖ್ಯಮಂತ್ರಿ ಮತ್ತು ಜೆಡಿಯು ನಾಯಕ ನಿತೀಶ್ ಕುಮಾರ್, ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಮತ್ತು ಎಸ್‌ಎಡಿ ಮುಖ್ಯಸ್ಥ ಪ್ರಕಾಶ್ ಸಿಂಗ್ ಬಾದಲ್ ಅವರನ್ನು ಸೆಪ್ಟೆಂಬರ್ 25, ಮಾಜಿ ಉಪ ಪ್ರಧಾನಿ ದೇವಿ ಲಾಲ್ ಅವರ ಜನ್ಮ ದಿನದಂದು ಒಂದೇ ವೇದಿಕೆಗೆ ಕರೆತರುತ್ತಿದ್ದಾರೆ. 

ಎನ್‌ಸಿಪಿ ನಾಯಕ ಶರದ್ ಪವಾರ್, ಟಿಎಂಸಿ ಅಧ್ಯಕ್ಷೆ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ ಮತ್ತು ಆರ್‌ಎಲ್‌ಡಿ ನಾಯಕ ಜಯಂತ್ ಚೌಧರಿ ಅವರನ್ನು ಹರಿಯಾಣದ ಜಿಂದ್‌ನಲ್ಲಿ ನಡೆಯುವ "ಬೃಹತ್" ರಾಜಕೀಯ ರ್ಯಾಲಿಗೆ ಆಹ್ವಾನಿಸಲಾಗಿದೆ ಮತ್ತು ಅವರ ಒಪ್ಪಿಗೆಗಾಗಿ ಕಾಯಲಾಗುತ್ತಿದೆ ಎಂದು ಐಎನ್‌ಎಲ್‌ಡಿ ನಾಯಕ ಅಭಯ್ ಚೌತಾಲ ಅವರು ಪಿಟಿಐಗೆ ತಿಳಿಸಿದ್ದಾರೆ.

ಮುಲಾಯಂ ಸಿಂಗ್ ಯಾದವ್, ನಿತೀಶ್ ಕುಮಾರ್, ಜೆಡಿ(ಎಸ್) ನಾಯಕ ದೇವೇಗೌಡ ಮತ್ತು ಬಾದಲ್ ಅವರು ದೇವಿ ಲಾಲ್ ಅವರ ಜನ್ಮ ವಾರ್ಷಿಕೋತ್ಸವದ ಅಂಗವಾಗಿ 'ಸಮ್ಮಾನ್ ಸಮರೋಹ್'ಗೆ ಹಾಜರಾಗುವುದಾಗಿ ಖಚಿತಪಡಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

"ಬಿಜೆಪಿ ಮತ್ತು ಕಾಂಗ್ರೆಸ್ಸೇತರ ಪಕ್ಷಗಳಿಂದ ಅನೇಕ ಸಮಾನ ಮನಸ್ಕ ನಾಯಕರು ಒಂದೇ ವೇದಿಕೆಯಲ್ಲಿ ಒಟ್ಟಿಗೆ ಸೇರುತ್ತಾರೆ ಮತ್ತು ಜನರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ವಿಶೇಷವಾಗಿ ರೈತರ ಸಮಸ್ಯೆಗಳನ್ನು ಪ್ರಸ್ತಾಪಿಸುತ್ತಾರೆ" ಎಂದು ಅಭಯ್ ಚೌತಾಲ ತಿಳಿಸಿದ್ದಾರೆ.

ಜನರು ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಪರ್ಯಾಯವನ್ನು ಹುಡುಕುತ್ತಿದ್ದಾರೆ ಎಂದು ಅವರು ಹೇಳಿದರು.

ಈ ಎಲ್ಲ ನಾಯಕರನ್ನು ಕರೆತರುವ ಮೂಲಕ "ನಮ್ಮ ಗುರಿ ದೇಶದ ಮತ್ತು ಜನರ ಒಟ್ಟಾರೆ ಕಲ್ಯಾಣಕ್ಕಾಗಿ ತೃತೀಯ ರಂಗವನ್ನು ರೂಪಿಸುವುದು" ಎಂದು ಚೌತಾಲ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com