ದೆಹಲಿ ಇನ್ನು 6 ದಿನ ಸ್ತಬ್ಧ: ಇಂದು ರಾತ್ರಿ 10 ಗಂಟೆಯಿಂದ ಬರುವ ಸೋಮವಾರ ಮುಂಜಾನೆ 6 ರವರೆಗೆ ಲಾಕ್ ಡೌನ್!

ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೊರೋನಾ ಸೋಂಕು ಪ್ರಕರಣ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರ ಸೋಮವಾರ ಲಾಕ್ ಡೌನ್ ಘೋಷಿಸಿದೆ. ಇದು ಇಂದು ರಾತ್ರಿ 10 ಗಂಟೆಯಿಂದ ಮುಂದಿನ ಸೋಮವಾರ ಮುಂಜಾನೆ 6 ಗಂಟೆಯವರೆಗೆ ಜಾರಿಯಲ್ಲಿರುತ್ತದೆ. 
ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್

ನವದೆಹಲಿ: ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೊರೋನಾ ಸೋಂಕು ಪ್ರಕರಣ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರ ಸೋಮವಾರ ಲಾಕ್ ಡೌನ್ ಘೋಷಿಸಿದೆ. ಇದು ಇಂದು ರಾತ್ರಿ 10 ಗಂಟೆಯಿಂದ ಮುಂದಿನ ಸೋಮವಾರ ಮುಂಜಾನೆ 6 ಗಂಟೆಯವರೆಗೆ ಜಾರಿಯಲ್ಲಿರುತ್ತದೆ. 

ಇಂದು ಸುದ್ದಿಗೋಷ್ಠಿಯಲ್ಲಿ ದೆಹಲಿಯಲ್ಲಿ 6 ದಿನಗಳ ಸಂಪೂರ್ಣ ಲಾಕ್ ಡೌನ್ ಘೋಷಿಸಿದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಅಗತ್ಯ ಸೇವೆಗಳು, ಆಹಾರ ಸೇವೆಗಳು, ವೈದ್ಯಕೀಯ ಸೇವೆಗಳು ಎಂದಿನಂತೆ ಮುಂದುವರಿಯಲಿದೆ. ಮದುವೆ ಇನ್ನಿತರ ಶುಭ ಸಮಾರಂಭಗಳನ್ನು ಕೇವಲ 50 ಜನರನ್ನು ಸೇರಿಸಿ ಮಾಡಬಹುದು. ಶವಸಂಸ್ಕಾರ ಕಾರ್ಯಕ್ಕೆ 20 ಜನರು ಸೇರುವ ಅನುಕೂಲವನ್ನು ಸರ್ಕಾರ ಮುಂದುವರಿಸಿದ್ದು, ಅದಕ್ಕಾಗಿ ಪ್ರತ್ಯೇಕವಾಗಿ ಪಾಸ್ ಗಳನ್ನು ನೀಡಲಾಗುತ್ತದೆ ಎಂದರು. 

ಲಾಕ್ ಡೌನ್ ಗೆ ಸಂಬಂಧಪಟ್ಟಂತೆ ದೆಹಲಿ ಸರ್ಕಾರ ಇನ್ನು ಕೆಲವೇ ಹೊತ್ತಿನಲ್ಲಿ ವಿಸ್ತೃತ ಆದೇಶ ಹೊರಡಿಸಲಿದೆ. ದೆಹಲಿಯಲ್ಲಿನ ಜನರ ಆರೋಗ್ಯ ವ್ಯವಸ್ಥೆ ತೀವ್ರ ಹದಗೆಟ್ಟು ಹೋಗಿದ್ದು, ನಗರ ಒತ್ತಡದಲ್ಲಿದೆ. ಆರೋಗ್ಯ ವ್ಯವಸ್ಥೆಯ ಕುಸಿತವನ್ನು ತಡೆಯಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ ಎಂದರು.

ಮುಂದಿನ 6 ದಿನಗಳಲ್ಲಿ ದೆಹಲಿಯಲ್ಲಿ ಹೆಚ್ಚಿನ ಹಾಸಿಗೆಗಳ ವ್ಯವಸ್ಥೆಗಳನ್ನು ಕೋವಿಡ್ ಸೋಂಕಿತ ರೋಗಿಗಳಿಗೆ ಮಾಡುತ್ತೇವೆ. ನಮಗೆ ಸಹಾಯ ಮಾಡಿದ ಕೇಂದ್ರ ಸರ್ಕಾರಕ್ಕೆ ಧನ್ಯವಾದಗಳು. ಲಾಕ್‌ಡೌನ್ ಅವಧಿಯನ್ನು ಆಮ್ಲಜನಕ, ಔಷಧಿ ವ್ಯವಸ್ಥೆ ಮಾಡಲು ಬಳಸಲಾಗುತ್ತದೆ. ಪ್ರತಿಯೊಬ್ಬರೂ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಕೊರೋನಾ ನಿಯಂತ್ರಣಕ್ಕೆ ಸಹಕರಿಸಿ ಎಂದು ಕೇಜ್ರಿವಾಲ್ ಮನವಿ ಮಾಡಿಕೊಂಡರು.

ವಿನಾಯ್ತಿ: ಮಾನ್ಯ ಹೊಂದಿರುವ ಗುರುತು ಚೀಟಿ ತೋರಿಸಿದರೆ ಖಾಸಗಿ ವೈದ್ಯಕೀಯ ಸಿಬ್ಬಂದಿಗೆ, ವೈದ್ಯರ ಪ್ರಿಸ್ಕ್ರಿಪ್ಷನ್ ತೋರಿಸಿದರೆ ಗರ್ಭಿಣಿಯರಿಗೆ, ರೋಗಿಗಳ ಜೊತೆ  ಆಸ್ಪತ್ರೆಗೆ ಹೋಗುವವರಿಗೆ, ಕೊರೋನಾ ಪರೀಕ್ಷೆ, ಲಸಿಕೆ ಪಡೆಯಲು ಹೋಗುವವರಿಗೆ ಸೂಕ್ತ ದಾಖಲೆಗಳನ್ನು ತೋರಿಸಿದರೆ ಲಾಕ್ ಡೌನ್ ಸಮಯದಲ್ಲಿ ಪ್ರಯಾಣಕ್ಕೆ ವಿನಾಯ್ತಿಯಿರುತ್ತದೆ. 

ವಲಸೆ ಕಾರ್ಮಿಕರಿಗೆ ಮನವಿ: ಇದೇ ಸಂದರ್ಭದಲ್ಲಿ ವಲಸೆ ಕಾರ್ಮಿಕರನ್ನು ವಿಶೇಷವಾಗಿ ಮನವಿ ಮಾಡಿಕೊಂಡ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಇದು ಸಣ್ಣ ಅವಧಿಯ ಲಾಕ್ ಡೌನ್ ಅಷ್ಟೇ, ಕೇವಲ 6 ದಿನಗಳವರೆಗೆ ಮಾತ್ರ, ದೆಹಲಿ ಬಿಟ್ಟು ಹೋಗಬೇಡಿ, ಈ ಲಾಕ್ ಡೌನ್ ಅವಧಿಯನ್ನು ವಿಸ್ತರಿಸಬೇಕಾದ ಅವಶ್ಯಕತೆ ಬರಲಿಕ್ಕಿಲ್ಲ ಎಂದು ನಾನು ಭಾವಿಸುತ್ತೇನೆ, ಸರ್ಕಾರ ನಿಮ್ಮ ರಕ್ಷಣೆಗಿದೆ ಎಂದು ಕೇಳಿಕೊಂಡಿದ್ದಾರೆ.

ದೆಹಲಿ ಸರ್ಕಾರ ಲಾಕ್ ಡೌನ್ ಘೋಷಣೆ ಮಾಡುತ್ತಿದ್ದಂತೆ ಜನರು ಇಂದು ಗೊಲೆ ಮಾರ್ಕೆಟ್ ಪ್ರದೇಶದಲ್ಲಿ ಲಿಕ್ಕರ್ ಶಾಪ್ ಮುಂದೆ ಸಾಲಿನಲ್ಲಿ ನಿಂತು ಖರೀದಿಸುವುದು ಕಂಡುಬಂತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com