ಪಿಎಂ-ಕಿಸಾನ್ ಯೋಜನೆ: ಪ್ರಧಾನಿ ಮೋದಿಯಿಂದ 9ನೇ ಕಂತಿನ ಹಣ ಬಿಡುಗಡೆ, ರೈತರ ಖಾತೆಗೆ ರೂ.1,16,292.88 ಕೋಟಿ ವರ್ಗಾವಣೆ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕಿಸಾನ್ ಸಮ್ಮಾನ್ ನಿಧಿಯ 9ನೇ ಕಂತಿನ ಹಣವನ್ನು ಸೋಮವಾರ ಬಿಡುಗಡೆ ಮಾಡಿದ್ದಾರೆ. 
ಪ್ರಧಾನಿ ಮೋದಿ
ಪ್ರಧಾನಿ ಮೋದಿ

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕಿಸಾನ್ ಸಮ್ಮಾನ್ ನಿಧಿಯ 9ನೇ ಕಂತಿನ ಹಣವನ್ನು ಸೋಮವಾರ ಬಿಡುಗಡೆ ಮಾಡಿದ್ದಾರೆ. 

ಕೇಂದ್ರ ಸರ್ಕಾರ ವಾರ್ಷಿಕವಾಗಿ ಪಿಎಂ-ಕಿಸಾನ್ ಯೋಜನೆಯಡಿ ಪ್ರತಿ ನಾಲ್ಕು ತಿಂಗಳಿಗೊಮ್ಮೆ 2 ಸಾವಿರದಂತೆ ಒಟ್ಟು 6 ಸಾವಿರ ರೂಪಾಯಿಗಳನ್ನು ರೈತರ ಖಾತೆಗಳಿಗೆ ನೇರ ವರ್ಗಾವಣೆ ಮಾಡುತ್ತಿದೆ. ಸುಮಾರು 9.75 ಕೋಟಿ ರೈತರಿಗೆ ಎರಡು ಸಾವಿರ ರೂ. ಜಮೆಯಾಗುತ್ತದೆ. ಪ್ರತಿ ಕಂತಿನಲ್ಲಿಯೂ 9.75 ಕೋಟಿ ರೈತರಿಗೆ ಒಟ್ಟು 19,500 ರೂ. ವರ್ಗಾವಣೆಯಾಗುತ್ತದೆ. 8ನೇ ಕಂತನ್ನು ಅಕ್ಷಯ ತೃತೀಯದಂದು 9 ಕೋಟಿ ರೈತರ ಖಾತೆಗೆ ಪಿಎಂ ಮೋದಿ ಬಿಡುಗಡೆ ಮಾಡಿದ್ದರು.

ಇದರಂತೆ ಇಂದು 9ನೇ ಕಂತಿನ ಹಣವನ್ನು ಪ್ರಧಾನಿ ಮೋದಿಯವರು ಬಿಡುಗಡೆ ಮಾಡಿದ್ದು, ರೈತರ ಖಾತೆಗೆ ಹಣ ಜಮಾ ಮಾಡಲಾಗಿದೆ. ಯೋಜನೆಯಡಿ ನೋಂದಾಯಿಸಲಾದ ರೈತರ ಬ್ಯಾಂಕ್ ಖಾತೆಗಳಿಗೆ ರೂ.2000ನ್ನು ನೇರವಾಗಿ ವರ್ಗಾಯಿಸಲಾಗಿದೆ ಎಂದು ತಿಳಿದುಬಂದಿದೆ. 

ದೇಶಾದ್ಯಂತ ಇರುವ ಅನ್ನದಾತರ ಖಾತೆಗೆ 1,16,292.88 ಕೋಟಿ ರೂ.ಗೂ ಅಧಿಕ ಪ್ರಧಾನಿ ನರೇಂದ್ರ ಮೋದಿಯವರು ಬಿಡುಗಡೆ ಮಾಡಿದ್ದಾರೆ. ಆರ್ಥಿಕ ವರ್ಷ 2020-21ರಲ್ಲಿ ಒಟ್ಟು 60,437 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿತ್ತು ಎಂದು ಕೇಂದ್ರ ಕೃಷಿ ಸಚಿವಾಲಯ ತಿಳಿಸಿದೆ.

ವಿಡಿಯೋ ಕಾನ್ಫರೆನ್ಸ್ ಮೂಲಕ 9ನೇ ಕಂತಿನ ಹಣ ಬಿಡುಗಡೆ ಮಾಡಿದ ಬಳಿಕ ದೇಶದ ಹಲವು ರೈತರ ಜೊತೆಗೆ ಪ್ರಧಾನಿ ಮೋದಿಯವರು ಸಂವಾದ ನಡೆಸಿದರು. 

ಈ ವೇಳೆ, ಈ ವರ್ಷ ದೇಶ 75ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಿದೆ. ಇದು ಮಹತ್ವದ ಮೈಲಿಗಲ್ಲಾಗಿದ್ದು ನಮಗೆ ಹೆಮ್ಮೆಯ ವಿಷಯವಾಗಿದೆ. ಮಾತ್ರವಲ್ಲದೆ ಹೊಸ ನಿರ್ಣಯಗಳು ಮತ್ತು ಗುರಿಗಳಿಗೆ ತೆರೆದುಕೊಳ್ಳುವ ಸಂದರ್ಭವಾಗಿದೆ. ಮುಂದಿನ 25 ವರ್ಷಗಳಲ್ಲಿ ಭಾರತ ಯಾವ ಸ್ಥಾನದಲ್ಲಿರಬೇಕು ಎಂಬ ಬಗ್ಗೆ ಈ ಸಂದರ್ಭದಲ್ಲಿ ನಾವು ನಿರ್ಧಾರ ಕೈಗೊಳ್ಳಬೇಕು ಎಂದು ಹೇಳಿದರು.

ಸ್ವಾತಂತ್ರ್ಯ ದೊರೆತು 100 ವರ್ಷಗಳಾಗುವ ಸಂದರ್ಭದಲ್ಲಿ, 2047ರಲ್ಲಿ ಭಾರತವು ಯಾವ ಸ್ಥಾನದಲ್ಲಿರಬೇಕು ಎಂಬುದನ್ನು ನಿರ್ಧರಿಸಬೇಕು. ಇದನ್ನು ನಿರ್ಧರಿಸುವಲ್ಲಿ ನಮ್ಮ ಕೃಷಿ, ಗ್ರಾಮಗಳು ಮತ್ತು ರೈತರು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಕೃಷಿಗೆ ಅಂತಹ ದಿಕ್ಕನ್ನು ನೀಡುವ ಸಮಯ ಇದಾಗಿದೆ. ಇದರಿಂದ ಹೊಸ ಸವಾಲುಗಳನ್ನು ಎದುರಿಸಲು ಮತ್ತು ಹೊಸ ಅವಕಾಶಗಳ ಲಾಭ ಪಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.. 

ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿಯೂ ನಮ್ಮ ರೈತರು ಒಗ್ಗಟ್ಟು ಪ್ರದರ್ಶಿಸಿರುವುದನ್ನು ನಾವು ನೋಡಿದ್ದೇವೆ. ರೈತರು ಕೃಷಿ ಉತ್ಪನ್ನಗಳನ್ನು ದಾಖಲೆಯ ಪ್ರಮಾಣದಲ್ಲಿ ಬೆಳೆದಿದ್ದಾರೆ. ಸರ್ಕಾರವೂ ರೈತರ ಕಷ್ಟಗಳನ್ನು ಆದಷ್ಟು ಕಡಿಮೆ ಮಾಡಲು ಯತ್ನಿಸಿದೆ. ಬಿತ್ತನೆ ಬೀಜಗಳು, ರಸಗೊಬ್ಬರ ಒದಗಿಸುವ ಮೂಲಕ ಹಾಗೂ ರೈತರು ಬೆಳೆದ ಬೆಳೆಗೆ ಮಾರುಕಟ್ಟೆ ಒದಗಿಸುವ ಮೂಲಕ ಅವರಿಗೆ ನೆರವಾಗಲು ಸರ್ಕಾರ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com