ನವದೆಹಲಿ: ದೆಹಲಿಯಲ್ಲಿ ಅತ್ಯಾಚಾರಕ್ಕೊಳಗಾಗಿ, ಹತ್ಯೆಯಾದ ಒಂಬತ್ತು ವರ್ಷದ ದಲಿತ ಬಾಲಕಿಯ ಕುಟುಂಬದ ಚಿತ್ರಗಳನ್ನು ಟ್ವೀಟ್ ಮಾಡಿದ್ದಕ್ಕಾಗಿ ಹಿರಿಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ಮಂಗಳವಾರ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ರಾಜಕೀಯ ಹಿತಾಸಕ್ತಿಗಾಗಿ ಇಂತಹ ವಿಚಾರಗಳನ್ನು ರಾಜಕೀಯಗೊಳಿಸಬಾರದು ಎಂದಿರುವ ನಡ್ಡಾ, ಚಿತ್ರಗಳನ್ನು ಪೋಸ್ಟ್ ಮಾಡುವ ಮೊದಲು ಕುಟುಂಬದ ಒಪ್ಪಿಗೆ ಪಡೆದಿದ್ದೆ ಎಂಬ ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ಸಂತ್ರಸ್ತೆಯ ಕುಟುಂಬ ತಿರಸ್ಕರಿಸಿದ್ದು, ಕಾಂಗ್ರೆಸ್ ನಾಯಕನ ಟ್ವಿಟರ್ ಖಾತೆಯನ್ನು ಮತ್ತೊಮ್ಮೆ ಲಾಕ್ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
"ರಾಹುಲ್ ಗಾಂಧಿ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದ್ದಾರೆ ಮತ್ತು ಸುಳ್ಳು ಹೇಳುವ ಅಭ್ಯಾಸ ಮಾಡಿಕೊಂಡಿದ್ದಾರೆ. ಸಾರ್ವಜನಿಕರು ಅವರ ರಾಜಕೀಯ ಖಾತೆಯನ್ನು ಲಾಕ್ ಮಾಡಿದ್ದಾರೆ, ಈಗ ಟ್ವಿಟರ್ ಕೂಡ ಅವರ ಖಾತೆಯನ್ನು ಲಾಕ್ ಮಾಡಬೇಕು" ಎಂದು ಪಕ್ಷದ ವಕ್ತಾರ ಸಂಬಿತ್ ಪಾತ್ರ ಹೇಳಿದ್ದಾರೆ.
ವರ್ಚುವಲ್ ಮೂಲಕ ಕೇರಳದ ಕೋಝಿಕೋಡ್ ಬಿಜೆಪಿ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಜೆಪಿ ನಡ್ಡಾ, "ರಾಹುಲ್ ಗಾಂಧಿಯವರ ರಾಜಕೀಯ ಪ್ರವಾಸೋದ್ಯಮ ಈಗ ಕೇರಳದಲ್ಲಿ ನಡೆಯುತ್ತಿದೆ. ಅವರು ಅಮೇಥಿಯಲ್ಲಿ ಸೋತರು, ಆದ್ದರಿಂದ ಅವರು ವಯನಾಡಿಗೆ ಓಡಿಹೋದರು" ಎಂದು ಹೇಳಿದರು.
Advertisement