ಅಹಮದಾಬಾದ್: ಭಾರತದಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿರುವ ವರೆಗೆ ಮಾತ್ರ ಸಂವಿಧಾನ, ಕಾನೂನುಗಳು ಮತ್ತು ಜಾತ್ಯತೀತೆಯ ಬಗ್ಗೆ ಮಾತುಕತೆಗಳು ನಡೆಯಲಿದೆ. ಹಿಂದೂಗಳು ಅಲ್ಪಸಂಖ್ಯಾತರಾದರೆ ನ್ಯಾಯಾಲಯಗಳು, ಲೋಕಸಭೆ, ಸಂವಿಧಾನ, ಜಾತ್ಯತೀತತೆ ಯಾವುದೂ ಇರುವುದಿಲ್ಲ ಎಂದು ಗುಜರಾತ್ ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಅವರು ಶನಿವಾರ ಹೇಳಿದ್ದಾರೆ.
ಈ ದೇಶದಲ್ಲಿ ಹಿಂದೂ ಬಹುಸಂಖ್ಯಾತರಾಗಿರುವ ವರೆಗೆ ಮಾತ್ರ ಸಂವಿಧಾನ, ಕಾನೂನು, ಜಾತ್ಯತೀತತೆ ಬಗ್ಗೆ ಮಾತನಾಡಬಹುದು. ಆದರೆ ಇನ್ನೊಂದು 1000 ದಿಂದ 2000 ವರ್ಷಗಳಲ್ಲಿ ಹಿಂದೂಗಳ ಸಂಖ್ಯೆ ಕಡಿಮೆಯಾಗಿ ಇತರೆ ಜನರ ಸಂಖ್ಯೆಯು ಹೆಚ್ಚಾಗುತ್ತದೆ. ಆವಾಗ ಅಲ್ಲಿ ಯಾವುದೇ ನ್ಯಾಯಾಲಯ, ಲೋಕಸಭೆ, ಸಂವಿಧಾನ, ಜಾತ್ಯತೀತತೆ ವ್ಯವಸ್ಥೆ ಇರುವುದಿಲ್ಲ. ಎಲ್ಲವೂ ಗಾಳಿಯಲ್ಲಿ ಮಾಯವಾಗುತ್ತದೆ' ಎಂದಿದ್ದಾರೆ.
ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಗಾಂಧಿನಗರದಲ್ಲಿ ಆಯೋಜಿಸಿದ ಭಾರತ ಮಾತೆಯ ದೇವಾಲಯದ ಮೂರ್ತಿ ಪ್ರತಿಷ್ಠಾಪನೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಗುಜರಾತ್ ಡಿಸಿಎಂ, 'ನಾನು ಮುಸ್ಲಿಂ, ಕ್ರಿಶ್ಚಿಯನ್ನರನ್ನು ಉದ್ದೇಶಿಸಿ ಮಾತನಾಡುತ್ತಿಲ್ಲ. ಏಕೆಂದರೆ ಅವರಲ್ಲೂ ಹೆಚ್ಚಿನವರು ದೇಶಪ್ರೇಮಿಗಳಾಗಿದ್ದಾರೆ' ಎಂದಿದ್ದಾರೆ.
ನಾನು ಎಲ್ಲರ ಬಗ್ಗೆ ಮಾತನಾಡುವುದಿಲ್ಲ. ಲಕ್ಷಾಂತರ ಕ್ರಿಸ್ಟಿಯನ್ ಹಾಗೂ ಮುಸ್ಲಿಂಮರು ದೇಶಭಕ್ತರಾಗಿದ್ದಾರೆ. ಸಾವಿರಾರು ಮುಸ್ಲಿಂಮರು ಸೇನೆ ಹಾಗೂ ಗುಜರಾತ್ ಪೊಲೀಸ್ ಪಡೆಯಲ್ಲಿದ್ದಾರೆ. ಆದರೆ ದೇಶಭಕ್ತಿ ಹೊಂದಿಲ್ಲದವರ ಬಗ್ಗೆ ಹೇಳುತ್ತಿದ್ದೇನೆ ಎಂದು ನಿತಿನ್ ಪಟೇಲ್ ಹೇಳಿದ್ದಾರೆ.
Advertisement