ತಾಲಿಬಾನ್ ಮುಖಂಡರನ್ನು ಭೇಟಿಯಾದ ಕತಾರ್ ನ ಭಾರತದ ರಾಯಭಾರಿ: ಭಯೋತ್ಪಾದನೆಗಾಗಿ ಆಫ್ಘನ್ ನೆಲ ಬಳಕೆ ಕುರಿತು ಕಳವಳ
ಅಫ್ಘಾನಿಸ್ತಾನದಿಂದ ಅಮೆರಿಕ ಸಂಪೂರ್ಣವಾಗಿ ಸೇನೆ ಹಿಂತೆಗೆತದ ದಿನವಾದ ಇಂದು ಕತಾರ್ ನ ಭಾರತ ರಾಯಭಾರಿ ದೀಪಕ್ ಮಿತ್ತಲ್ ಮಂಗಳವಾರ ತಾಲಿಬಾನ್ ಮುಖಂಡ ಶೇರ್ ಮೊಹಮ್ಮದ್ ಅಬ್ಬಾಸ್ ಸ್ಟಾನೆಕ್ಜಾಯ್ ಅವರನ್ನು ದೋಹಾದಲ್ಲಿ ಭೇಟಿಯಾಗಿದ್ದಾರೆ.
Published: 31st August 2021 07:56 PM | Last Updated: 31st August 2021 08:16 PM | A+A A-

ತಾಲಿಬಾನ್ ಮುಖಂಡರು
ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಅಫ್ಘಾನಿಸ್ತಾನದಿಂದ ಅಮೆರಿಕ ಸಂಪೂರ್ಣವಾಗಿ ಸೇನೆ ಹಿಂತೆಗೆತದ ದಿನವಾದ ಇಂದು ಕತಾರ್ ನ ಭಾರತ ರಾಯಭಾರಿ ದೀಪಕ್ ಮಿತ್ತಲ್ ಮಂಗಳವಾರ ತಾಲಿಬಾನ್ ಮುಖಂಡ ಶೇರ್ ಮೊಹಮ್ಮದ್ ಅಬ್ಬಾಸ್ ಸ್ಟಾನೆಕ್ಜಾಯ್ ಅವರನ್ನು ದೋಹಾದಲ್ಲಿ ಭೇಟಿಯಾಗಿದ್ದು, ಉಭಯ ಮುಖಂಡರ ನಡುವೆ ಮೊದಲ ಉನ್ನತ ಮಟ್ಟದ ಸಂಪರ್ಕವೇರ್ಪಟ್ಟಿದೆ.
ಅಫ್ಘಾನಿಸ್ತಾನ ಮಣ್ಣನ್ನು ಯಾವುದೇ ರೀತಿಯಲ್ಲೂ ಭಯೋತ್ಪಾದನೆ ಮತ್ತು ಭಾರತ ವಿರೋಧಿ ಚಟುವಟಿಕೆಗಳಿಗೆ ಬಳಸದಂತೆ ಭಾರತದ ಕಳವಳವನ್ನು ಮಿತ್ತಲ್ ಸಭೆಯಲ್ಲಿ ವ್ಯಕ್ತಪಡಿಸಿರುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.
ಸಭೆಯಲ್ಲಿ ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತದ ಪ್ರಜೆಗಳು ಹಾಗೂ ಭಾರತಕ್ಕೆ ತೆರಳುವ ಆಫ್ಘನ್ ಭಾರತೀಯರಿಗೆ ಸುರಕ್ಷತೆ, ಭದ್ರತೆ ಮತ್ತು ಶೀಘ್ರ ಹಿಂತಿರುಗುವಿಕೆ ಕುರಿತಂತೆ ಚರ್ಚೆ ನಡೆಯಿತು ಎಂದು ಸಚಿವಾಲಯ ತಿಳಿಸಿದೆ. ಈ ವಿಚಾರಗಳನ್ನು ಸಕಾರಾತ್ಮಕವಾಗಿ ಬಗೆಹರಿಸುವುದಾಗಿ ತಾಲಿಬಾನ್ ಮುಖಂಡರು ಮಿತ್ತಲ್ ಅವರಿಗೆ ಭರವಸೆ ನೀಡಿದ್ದಾರೆ ಎಂದು ಎಂಇಎ ಹೇಳಿದೆ.
ತಾಲಿಬಾನ್ ಮನವಿ ಮೇರೆಗೆ ಇಂದು ದೋಹಾದಲ್ಲಿನ ಭಾರತದ ರಾಯಭಾರಿ ಕಚೇರಿಯಲ್ಲಿ ಕತ್ತಾರ್ ನ ಭಾರತದ ರಾಯಭಾರಿ ದೀಪಕ್ ಮಿತ್ತಲ್ ಮತ್ತು ತಾಲಿಬಾನ್ ರಾಜಕೀಯ ಕಚೇರಿ ಮುಖಂಡ ಶೇರ್ ಮೊಹಮ್ಮದ್ ಅಬ್ಬಾಸ್ ಸ್ಟಾನೆಕ್ಜಾಯ್ ಅವರನ್ನು ಭೇಟಿಯಾಗಿದ್ದಾಗಿ ಎಂಎಇ ಹೇಳಿಕೆಯಲ್ಲಿ ತಿಳಿಸಿದೆ.