ಪಂಜಾಬ್ ಚುನಾವಣೆ ಹಿನ್ನೆಲೆ: ಮೈತ್ರಿಗಾಗಿ ಅಮರೀಂದರ್ ಸಿಂಗ್ ಜೊತೆಗೆ ಬಿಜೆಪಿ ಮಾತುಕತೆ- ಅಮಿತ್ ಶಾ
ಪಂಜಾಬ್ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಹಾಗೂ ಶಿರೋಮಣಿ ಅಕಾಲಿ ದಳದ ಮಾಜಿ ಮುಖಂಡ ಸುಖ್ ದೇವ್ ಸಿಂಗ್ ದಿಂಡ್ಸಾ ಅವರ ಪಕ್ಷಗಳ ಮೈತ್ರಿಗಾಗಿ ಬಿಜೆಪಿ ಮಾತುಕತೆ ನಡೆಸುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ತಿಳಿಸಿದ್ದಾರೆ.
Published: 04th December 2021 04:45 PM | Last Updated: 04th December 2021 04:45 PM | A+A A-

ಕೇಂದ್ರ ಗೃಹ ಸಚಿವ ಅಮಿತ್ ಶಾ
ನವದೆಹಲಿ: ಪಂಜಾಬ್ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಹಾಗೂ ಶಿರೋಮಣಿ ಅಕಾಲಿ ದಳದ ಮಾಜಿ ಮುಖಂಡ ಸುಖ್ ದೇವ್ ಸಿಂಗ್ ದಿಂಡ್ಸಾ ಅವರ ಪಕ್ಷಗಳ ಮೈತ್ರಿಗಾಗಿ ಬಿಜೆಪಿ ಮಾತುಕತೆ ನಡೆಸುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ತಿಳಿಸಿದ್ದಾರೆ.
ಹೆಚ್ ಟಿ ಲೀಡರ್ ಶಿಫ್ ಸಮ್ಮಿಟ್ 2021 ಸಂವಾದದಲ್ಲಿ, ಪಂಜಾಬ್ ಮತ್ತು ಉತ್ತರ ಪ್ರದೇಶ ಚುನಾವಣೆ ಮೇಲೆ ರೈತರ ಪ್ರತಿಭಟನೆ ಪರಿಣಾಮ ಬೀರಲಿದೆ ಅನ್ನುವುದನ್ನು ಅಲ್ಲಗಳೆದ ಅಮಿತ್ ಶಾ, ಕೃಷಿ ಕಾಯ್ದೆ ರದ್ದುಗೊಂಡ ನಂತರ ಇತರ ಸಮಸ್ಯೆಗಳೇನೂ ಇಲ್ಲ ಎಂದರು. ಉತ್ತರ ಪ್ರದೇಶದಲ್ಲಿ ಪೂರ್ಣ ಬಹುಮತದೊಂದಿಗೆ ಬಿಜೆಪಿ ಮತ್ತೆ ಸರ್ಕಾರ ರಚಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಮುಂದಿನ ವರ್ಷ ಪಂಜಾಬ್ ಮತ್ತು ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ನಡೆಯಲಿದೆ. ಕ್ಯಾಪ್ಟನ್ ಅಮರೀಂದರ್ ಸಿಂಗ್ ಹಾಗೂ ಸುಖ್ ದೇವ್ ಸಿಂಗ್ ದಿಂಡ್ಸಾ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ, ಅವರ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯಿದೆ. ಸಕರಾತ್ಮಕ ಮನಸ್ಸಿನೊಂದಿಗೆ ಉಭಯ ಪಕ್ಷಗಳೊಂದಿಗೆ ಮಾತುಕತೆ ನಡೆಸುವುದಾಗಿ ಅಮಿತ್ ಶಾ ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ವಿಶಾಲ ಹೃದಯದೊಂದಿಗೆ ಮೂರು ಕೃಷಿ ಕಾನೂನು ರದ್ದುಗೊಳಿಸಿದ್ದಾರೆ. ಹೃದಯ ವೈಶಾಲ್ಯತೆಯೊಂದಿಗೆ ರೈತರ ಪ್ರತಿಭಟನೆ ಅಂತ್ಯಗೊಳಿಸಿದ್ದಾರೆ. ಪಂಜಾಬ್ ನಲ್ಲಿ ಈಗ ರೈತರ ಸಮಸ್ಯೆಗಳೇನೂ ಇಲ್ಲ ಅನ್ನಿಸುತ್ತಿದೆ. ಆರ್ಹತೆ ಆಧಾರದಲ್ಲಿ ಚುನಾವಣೆಯಲ್ಲಿ ಹೋರಾಟ ನಡೆಸಲಾಗುವುದು ಎಂದು ಅವರು ಹೇಳಿದರು.
ಉತ್ತರ ಪ್ರದೇಶದಲ್ಲಿ ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಕುರಿತ ಪ್ರಶ್ನೆಯನ್ನು ಅಲ್ಲಗಳೆದ ಅಮಿತ್ ಶಾ, ರಾಜಕೀಯ ಭೌತಶಾಸ್ತ್ರವಲ್ಲ, ಆದರೆ, ರಾಸಾಯನಶಾಸ್ತ್ರ, ಎರಡು ಕೆಮಿಕಲ್ ಸೇರಿದಾಗ ಮೂರನೇ ಕೆಮಿಕಲ್ ಸೃಷ್ಟಿಯಾಗುತ್ತದೆ. ಈ ಹಿಂದೆ ಎಸ್ ಪಿ, ಕಾಂಗ್ರೆಸ್ ಮೈತ್ರಿ ಮಾಡಿಕೊಂಡಾಗ ಏನೆಲ್ಲಾ ಆಗಿದೆ ಎಂಬುದು ಜನರಿಗೆ ಗೊತ್ತಿದೆ. ವೋಟ್ ಬ್ಯಾಂಕ್ ಆಧಾರದ ಮೇಲೆ ಮೈತ್ರಿಯನ್ನು ಜನರು ಇದೀಗ ಸಲಹೆ ಮಾಡಲ್ಲ ಎಂದರು. ಉತ್ತರ ಪ್ರದೇಶದಲ್ಲಿ ಪೂರ್ಣ ಬಹುಮತದೊಂದಿಗೆ ಬಿಜೆಪಿ ಸರ್ಕಾರ ರಚಿಸಲಿದೆ ಎಂಬ ವಿಶ್ವಾಸವಿದೆ ಎಂದು ಅಮಿತ್ ಶಾ ಹೇಳಿದರು.