ನವದೆಹಲಿ: ತಮಿಳುನಾಡಿನ ಕೂನೂರು ಬಳಿ ನಡೆದ ಹೆಲಿಕಾಫ್ಟರ್ ದುರಂತದಲ್ಲಿ ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಅವರ ಅಕಾಲಿಕ ಮರಣದಿಂದ ಈಗ ಮುಂದಿನ ಸಿಡಿಎಸ್ ಯಾರು ಎಂಬ ಪ್ರಶ್ನೆ ಉದ್ಭವಿಸಿದೆ.
ರಾವತ್ ನಿಧನದ ಹಿನ್ನೆಲೆಯಲ್ಲಿ ಬುಧವಾರ ಸಂಜೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ತುರ್ತು ಸಭೆಯಲ್ಲಿ ಸಂತಾಪ ಸೂಚಿಸಲಾಗಿತ್ತು ಆದರೆ ಬಿಪಿನ್ ರಾವತ್ ಅವರ ಉತ್ತರಾಧಿಕಾರಿ ನೇಮಕದ ಬಗ್ಗೆ ಯಾವುದೇ ಚರ್ಚೆಯಾಗಿರಲಿಲ್ಲ.
ಸಿಡಿಎಸ್ ಹುದ್ದೆ ಮೂರೂ ಸೇನಾಪಡೆಗಳ ನಡುವಿನ ಸಮನ್ವಯತೆಗೆ ಅತ್ಯಂತ ಮಹತ್ವದ ಹುದ್ದೆಯಾಗಿದ್ದು, ಹೆಚ್ಚು ಸಮಯ ಖಾಲಿ ಇರುವುದಕ್ಕೆ ಅವಕಾಶವಿಲ್ಲ. ಆದ್ದರಿಂದ ಶೀಘ್ರವೇ ಬಿಪಿನ್ ರಾವತ್ ಅವರ ಉತ್ತರಾಧಿಕಾರಿ ನೇಮಕವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಸಿಡಿಎಸ್ ಹುದ್ದೆಗೆ ನೇಮಕವಾಗುವವರು 65 ವರ್ಷಗಳ ವಯಸ್ಸಿನ ವರೆಗೆ ಸೇವೆ ಸಲ್ಲಿಸಲು ಅವಕಾಶವಿದ್ದು, ಇತರ ಸೇನಾ ಮುಖ್ಯಸ್ಥರಿಗೆ ಈ ವಯಸ್ಸಿನ ಮಿತಿ 62 ಕ್ಕೆ ನಿಗದಿಯಾಗಿದೆ.
ಐಎಎಫ್ ವಿಆರ್ ಚೌಧರಿ ಈ ವರ್ಷ ಸೆ.30 ರಂದು ಅಧಿಕಾರ ವಹಿಸಿಕೊಂಡಿದ್ದರೆ, ಕೆಲವೇ ದಿನಗಳ ಹಿಂದೆಯಷ್ಟೇ ನೌಕಾಪಡೆಯ ಮುಖ್ಯಸ್ಥರಾಗಿ ಅಡ್ಮಿರಲ್ ಹರಿ ಕುಮಾರ್ ಅಧಿಕಾರ ವಹಿಸಿಕೊಂಡಿದ್ದರು. ಇನ್ನು ಸೇನಾ ಮುಖ್ಯಸ್ಥ ಜನರಲ್ ನರಾವಣೆ 2022 ರ ಏಪ್ರಿಲ್ ಗೆ ನಿವೃತ್ತರಾಗಲಿದ್ದಾರೆ.
ಒಂದು ವೇಳೆ ಜನರಲ್ ನರಾವಣೆ ಬಿಪಿನ್ ರಾವತ್ ಅವರ ಉತ್ತರಾಧಿಕಾರಿಯಾಗಿ ದೇಶದ 2 ನೇ ಸಿಡಿಎಸ್ ಆಗಿ ನೇಮಕಗೊಂಡರೆ ಭೂಸೇನಾ ಮುಖ್ಯಸ್ಥರ ಹುದ್ದೆ ಖಾಲಿಯಾಗಲಿದೆ. ಈ ಸಾಧ್ಯತೆಗೆ ಪುಷ್ಟಿ ನೀಡುವಂತೆ ಸೇನಾ ಪಡೆಯ ಉಪ ಮುಖ್ಯಸ್ಥರಾಗಿರುವ ಲೆಫ್ಟಿನೆಂಟ್ ಜನರಲ್ ಚಂಡಿ ಪ್ರಸಾದ್ ಮೊಹಂತಿ ತಮ್ಮ ಕತಾರ್ ಭೇಟಿಯನ್ನು ಅರ್ಧಕ್ಕೇ ಮೊಟಕುಗೊಳಿಸಿ ನವದೆಹಲಿಗೆ ಆಗಮಿಸುತ್ತಿದ್ದಾರೆ.
ನರಾವಣೆ 2019 ರ ಡಿ.31 ರಂದು ಸೇನಾ ಪಡೆಯ 27 ನೇ ಮುಖ್ಯಸ್ಥರಾಗಿ ನೇಮಕಗೊಂಡಿದ್ದರು. ಇದಕ್ಕೂ ಮುನ್ನ ಸೇನಾ ಪಡೆಯ ಉಪಮುಖ್ಯಸ್ಥರಾಗಿಯೂ ನರಾವಣೆ ಸೇವೆ ಸಲ್ಲಿಸಿದ್ದರು.
ಸಿಡಿಎಸ್ ಹೊಸದಾಗಿ ಸೃಷ್ಟಿಯಾಗಿರುವ ಹುದ್ದೆಯಾಗಿದ್ದು ಬಿಪಿನ್ ರಾವತ್ ಇದರ ಮೊದಲ ಮುಖ್ಯಸ್ಥರಾಗಿದ್ದರು. ಈ ಹಿನ್ನೆಲೆಯಲ್ಲಿ ಮುಂದಿನ ಸಿಡಿಎಸ್ ನೇಮಕದ ಬಗ್ಗೆ ಭದ್ರತೆ ಮೇಲಿನ ಸಂಪುಟ ಸಮಿತಿಯ ನಿರ್ಧಾರ ಅಂತಿಮವಾಗಿರಲಿದೆ.
Advertisement