ಅಮೇಥಿಗಿಂದು ರಾಹುಲ್ ಗಾಂಧಿ ಭೇಟಿ: 'ಬಿಜೆಪಿ ಓಡಿಸಿ, ಹಣದುಬ್ಬರ ತೊಲಗಿಸಿ' ಪಾದಯಾತ್ರೆಗೆ ಚಾಲನೆ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಶನಿವಾರ ಉತ್ತರಪ್ರದೇಶದ ಅಮೇಥಿಗೆ ಭೇಟಿ ನೀಡಲಿದ್ದು, ಈ ವೇಳೆ  'ಬಿಜೆಪಿ ಭಗಾವೊ ಮೆಹಂಗೈ ಹಠಾವೋ' ('ಬಿಜೆಪಿ ಓಡಿಸಿ, ಹಣದುಬ್ಬರ ತೊಲಗಿಸಿ') ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ
Updated on

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಶನಿವಾರ ಉತ್ತರಪ್ರದೇಶದ ಅಮೇಥಿಗೆ ಭೇಟಿ ನೀಡಲಿದ್ದು, ಈ ವೇಳೆ  'ಬಿಜೆಪಿ ಭಗಾವೊ' 'ಮೆಹಂಗೈ ಹಠಾವೋ' ('ಬಿಜೆಪಿ ಓಡಿಸಿ, ಹಣದುಬ್ಬರ ತೊಲಗಿಸಿ') ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ.

ಕಾಂಗ್ರೆಸ್​​ನಿಂದ ರಾಷ್ಟ್ರಾದ್ಯಂತ ನವೆಂಬರ್​ 14ರಿಂದ ಸಾರ್ವಜನಿಕ ಜಾಗೃತಿ ​ಅಭಿಯಾನ ನಡೆಯುತ್ತಿದ್ದು, ಅದರ ಒಂದು ಭಾಗವಾಗಿ ಈ ರ್ಯಾಲಿ ಇಂದು ಅಮೇಠಿಯಲ್ಲಿ ನಡೆಯುತ್ತಿದೆ.  

ರಾಹುಲ್​ ಗಾಂಧಿ ಜಗದೀಶ್​ಪುರದಿಂದ ಹರಿಮೌವರೆಗೆ ಪಾದಯಾತ್ರೆ ನಡೆಸಲಿದ್ದಾರೆ ಎಂದೂ ಹೇಳಲಾಗಿದೆ. ಈ  ಪಾದಯಾತ್ರೆಯಲ್ಲಿ ಸ್ಥಳೀಯ ಕಾಂಗ್ರೆಸ್​ ನಾಯಕರೂ ಕೂಡ ಪಾಲ್ಗೊಳ್ಳುವರು ಎಂದು ತಿಳಿದುಬಂದಿದೆ.

ಕಳೆದ 2019ರ ಲೋಕಸಭಾ ಚುನಾವಣೆಯಲ್ಲಿ ಅಮೇಠಿಯಿಂದ ಸ್ಪರ್ಧಿಸಿದ್ದ ರಾಹುಲ್ ಗಾಂಧಿ ಅಲ್ಲಿ ಬಿಜೆಪಿಯ ಸ್ಮೃತಿ ಇರಾನಿ ವಿರುದ್ಧ ಸೋಲು ಕಂಡಿದ್ದರು. ಸೋಲು ಕಂಡ ಎರಡೂವರೆ ವರ್ಷದ ಬಳಿಕ ರಾಹುಲ್ ಅವರು ಅಮೇಥಿಗೆ ಭೇಟಿ ನೀಡುತ್ತಿದ್ದಾರೆ.

ಅಮೇಥಿ ಈ ಹಿಂದಿನ 15 ಲೋಕಸಭಾ ಚುನಾವಣೆಯಲ್ಲೂ ನೆಹರೂ-ಗಾಂಧಿ ಕುಟುಂಬದ ಭದ್ರಕೋಟೆಯೆಂದೇ ಬಿಂಬಿತವಾಗಿತ್ತು. ಆದರೆ, 2019ರಲ್ಲಿ ಇದು ಗಾಂಧಿ ಕುಟುಂಬದ ಕೈತಪ್ಪಿತ್ತು. ಇಂದು ರಾಹುಲ್ ಗಾಂಧಿ ಅಲ್ಲಿಗೆ ತೆರಳಲಿದ್ದು, ದಿನಪೂರ್ತಿ ಅಲ್ಲಿಯೇ ಕಾಲ ಕಳೆಯಲಿದ್ದಾರೆ. ಹಾಗೇಯೇ ಭಾನುವಾರ ಪ್ರಿಯಾಂಕಾ ಗಾಂಧಿಯವರು  ಅಮೇಥಿಗೆ ಭೇಟಿ ನೀಡಲಿದ್ದಾರೆ.

2017ರಲ್ಲಿ ಉತ್ತರಪ್ರದೇಶದಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ವಿಜಯ ಸಾಧಿಸಿತ್ತು. ಒಟ್ಟಾರೆ 403 ಕ್ಷೇತ್ರಗಳಲ್ಲಿ 312 ವಿಧಾನಸಭಾ ಕ್ಷೇತ್ರಗಳಲ್ಲಿ ಗೆದ್ದಿತ್ತು. ಸಮಾಜವಾದಿ ಪಕ್ಷ 47, ಬಿಎಸ್​ಪಿ 19 ಸೀಟುಗಳನ್ನು ಗೆದ್ದಿದ್ದರೆ, ಕಾಂಗ್ರೆಸ್ ಕೇವಲ 7 ಕ್ಷೇತ್ರಗಳಲ್ಲಿ ಜಯಭೇರಿ ಸಾಧಿಸಿತ್ತು. ಆದರೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಹೇಗಾದರೂ ಅಲ್ಲಿ ಅಧಿಕಾರಿ ಹಿಡಿಯಬೇಕು ಎಂಬುದು ಕಾಂಗ್ರೆಸ್​ನ ಪ್ರಯತ್ನವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com