ನವದೆಹಲಿ: ಗಂಗಾ ಎಕ್ಸ್ಪ್ರೆಸ್ವೇ ಉತ್ತರ ಪ್ರದೇಶದಲ್ಲಿ ಸಂಪರ್ಕವನ್ನು ಸುಧಾರಿಸಲಿದ್ದು, ಆರ್ಥಿಕ ಅಭಿವೃದ್ಧಿ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಇಂದು ಮಧ್ಯಾಹ್ನ 1 ಗಂಟೆಗೆ, ಗಂಗಾ ಎಕ್ಸ್ಪ್ರೆಸ್ವೇಗೆ ಶಂಕುಸ್ಥಾಪನೆ ಮಾಡಲು ಶಹಜಹಾನ್ಪುರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದೇನೆ. ಈ ಎಕ್ಸ್ಪ್ರೆಸ್ವೇ ಉತ್ತರ ಪ್ರದೇಶದಾದ್ಯಂತ ಸಂಪರ್ಕವನ್ನು ಸುಧಾರಿಸುವ ಪ್ರಮುಖ ಮೂಲ ಯೋಜನೆಯಾಗಿದೆ. ಆರ್ಥಿಕ ಅಭಿವೃದ್ಧಿ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದ ಅತಿ ಹೆಚ್ಚು ಉದ್ದದ ಗಂಗಾ ಎಕ್ಸ್ಪ್ರೆಸ್ವೇ ನಿರ್ಮಾಣಕ್ಕೆ ಶಹಜಹಾನ್ಪುರದಲ್ಲಿ ಪ್ರಧಾನಿ ಮೋದಿಯವರು ಇಂದು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ದೇಶದಾದ್ಯಂತ ವೇಗದ ಸಂಪರ್ಕ ಜಾಲವನ್ನು ಒದಗಿಸುವ ಪ್ರಧಾನಿ ಮೋದಿ ಅವರ ದೂರದೃಷ್ಟಿ ಈ ಎಕ್ಸ್ಪ್ರೆಸ್ವೇ ನಿರ್ಮಾಣದ ಹಿಂದಿನ ಪ್ರೇರಣೆಯಾಗಿದೆ ಎಂದು ಪ್ರಧಾನ ಮಂತ್ರಿ ಕಾರ್ಯಾಲಯ ತಿಳಿಸಿದೆ.
ಮೀರತ್ನಿಂದ ಪ್ರಯಾಗ್ರಾಜ್ಗೆ ಎಕ್ಸ್ಪ್ರೆಸ್ವೇ ಉತ್ತರ ಪ್ರದೇಶದ 12 ಜಿಲ್ಲೆಗಳ ಮೂಲಕ ಹಾದು ಹೋಗಲಿದ್ದು, ರಾಜ್ಯದ ಪಶ್ಚಿಮ ಮತ್ತು ಪೂರ್ವ ಪ್ರದೇಶಗಳನ್ನು ಸಂಪರ್ಕಿಸುತ್ತದೆ. ಮೀರತ್ನ ಬಿಜೌಲಿ ಗ್ರಾಮದ ಬಳಿ ಪ್ರಾರಂಭವಾಗುವ ಎಕ್ಸ್ಪ್ರೆಸ್ ವೇ ಪ್ರಯಾಗ್ರಾಜ್ನ ಜುದಾಪುರ್ ದಂಡು ಗ್ರಾಮದ ವರೆಗೂ ವಿಸ್ತರಿಸುತ್ತದೆ. ಈ ಹೆದ್ದಾರಿಯು ಮೀರತ್, ಹಾಪುರ, ಬುಲಂದ್ಶಹರ್, ಅಮ್ರೋಹಾ, ಸಂಭಾಲ್, ಬುದೌನ್, ಶಹಜಹಾನ್ಪುರ, ಹರ್ದೋಯಿ, ಉನ್ನಾವೊ, ರಾಯ್ ಬರೇಲಿ, ಪ್ರತಾಪಗಢ ಮತ್ತು ಪ್ರಯಾಗರಾಜ್ ಮೂಲಕ ಹಾದು ಹೋಗುತ್ತದೆ.
ಶಹಜಹಾನ್ಪುರದ ಎಕ್ಸ್ಪ್ರೆಸ್ ವೇನಲ್ಲಿ ಭಾರತದ ವಾಯುಪಡೆಯ ವಿಮಾನಗಳಿಗೆ ತುರ್ತು ಟೇಕ್-ಆಫ್ ಮತ್ತು ಲ್ಯಾಂಡಿಂಗ್ ಮಾಡಲು 3.5 ಕಿ.ಮೀ. ಉದ್ದದ ಏರ್-ಸ್ಟ್ರಿಪ್ ಕೂಡ ನಿರ್ಮಿಸಲಾಗುವುದು. ಎಕ್ಸ್ಪ್ರೆಸ್ ವೇ ಉದ್ದಕ್ಕೂ ಕೈಗಾರಿಕಾ ಕಾರಿಡಾರ್ ನಿರ್ಮಿಸಲು ಉದ್ದೇಶಿಸಲಾಗಿದೆ.
ಎಕ್ಸ್ಪ್ರೆಸ್ ವೇ ನಿರ್ಮಾಣದಿಂದ ಕೈಗಾರಿಕಾ ಅಭಿವೃದ್ಧಿ, ವ್ಯಾಪಾರ, ಕೃಷಿ, ಪ್ರವಾಸೋದ್ಯಮ ಸೇರಿದಂತೆ ಪ್ರದೇಶದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಉತ್ತೇಜನವನ್ನು ನೀಡಲಿದೆ. ಕಾಮಗಾರಿ 2024ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
Advertisement