ಗುವಾಹತಿ: ಬಾಂಗ್ಲಾದೇಶ ಗಡಿಯಲ್ಲಿ ಭಾರತೀಯ ಗಡಿ ರಕ್ಷಣಾ ಪಡೆ ಯೋಧರು ಕಾರ್ಯಾಚರಣೆ ನಡೆಸಿ ಓರ್ವ ಶಂಕಿತ ಜಾನುವಾರು ಕಳ್ಳಸಾಗಣೆದಾರನನ್ನು ಹೊಡೆದುರುಳಿಸಿದ್ದಾರೆ.
ಈ ಬಗ್ಗೆ ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದು, ಗುರುವಾರ ಮುಂಜಾನೆ ಪಶ್ಚಿಮ ಬಂಗಾಳದ ಕೂಚ್ಬೆಹಾರ್ ಜಿಲ್ಲೆಯ ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಶಂಕಿತ ಜಾನುವಾರು ಕಳ್ಳಸಾಗಣೆದಾರನನ್ನು ಬಿಎಸ್ಎಫ್ ಗುಂಡಿಕ್ಕಿ ಕೊಂದಿದೆ. ಭದ್ರತಾ ಸಿಬ್ಬಂದಿಯಿಂದ ಐಎನ್ಎಸ್ಎಎಸ್ ರೈಫಲ್ಗಳನ್ನು ಕಸಿದುಕೊಳ್ಳಲು ಯತ್ನಿಸಿದ ನಂತರ, 15-20 ಶಂಕಿತ ಜಾನುವಾರು ಕಳ್ಳಸಾಗಣೆದಾರರ ಗುಂಪಿನ ಮೇಲೆ ಬಿಎಸ್ಎಫ್ ಗುಂಡು ಹಾರಿಸಿತು ಎಂದು ಪೊಲೀಸರು ತಿಳಿಸಿದ್ದಾರೆ.
ಶಂಕಿತ ಕಳ್ಳಸಾಗಾಣಿಕೆದಾರನ ಮೇಲೆ ಗುಂಡು ಹಾರಿಸಲಾಯಿತು, ಆತನಿಗೆ ಬುಲೆಟ್ ತಗುಲಿದ್ದರಿಂದ ಗಾಯವಾಗಿದ್ದು, ಆಸ್ಪತ್ರೆಗೆ ಕಳುಹಿಸಲಾಯಿತು ಎಂದು ಗುವಾಹಟಿಯಲ್ಲಿನ ಬಿಎಸ್ಎಫ್ ವಕ್ತಾರರು ಹೇಳಿದ್ದಾರೆ.
ಈ ಪ್ರದೇಶವು ಬಿಎಸ್ಎಫ್ ಗುವಾಹಟಿ ಫ್ರಾಂಟಿಯರ್ನ ವ್ಯಾಪ್ತಿಯಲ್ಲಿದ್ದು, ಗುಂಡು ಹಾರಿಸಿದ್ದರಿಂದ ಗಿಟಾಲ್ದಾಹಾ ಬ್ಲಾಕ್ II ರ ನಿವಾಸಿ ಲುತ್ಪರ್ ರಹಮಾನ್ ಗಾಯಗೊಂಡರು. ಅವರನ್ನು ಬಿಎಸ್ಎಫ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಅಲ್ಲಿ ಅವರು ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾದರು. ರೆಹಮಾನ್ ಈ ಪ್ರದೇಶದ ಪ್ರಸಿದ್ಧ ಜಾನುವಾರು ಕಳ್ಳಸಾಗಣೆದಾರನಾಗಿದ್ದ. ಘರ್ಷಣೆಯಲ್ಲಿ ಬಿಎಸ್ಎಫ್ ಸಿಬ್ಬಂದಿ ಕೂಡ ಗಾಯಗೊಂಡಿದ್ದಾರೆ ಎಂದು ಕೂಚ್ಬೆಹಾರ್ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳ್ಳಸಾಗಾಣಿಕೆದಾರರನ್ನು ತಡೆಯಲು ಬಿಎಸ್ಎಫ್ ಪಂಪ್-ಆಕ್ಷನ್ ಗನ್ ಅನ್ನು ಬಳಸಿತು. ಆದರೆ ಗಲಾಟೆ ಆರಂಭವಾದಾಗ, ಅವರು ಸಿಬ್ಬಂದಿಯಿಂದ ಐಎನ್ಎಸ್ಎಎಸ್ ರೈಫಲ್ಗಳನ್ನು ಕಸಿದುಕೊಳ್ಳಲು ಪ್ರಯತ್ನಿಸಿದರು. ನಂತರ ಪಡೆಗಳು ಆತ್ಮರಕ್ಷಣೆಗಾಗಿ ಆರು ಸುತ್ತು ಗುಂಡು ಹಾರಿಸಿದವು ಎಂದು ಅಧಿಕಾರಿ ಹೇಳಿದರು.
ಬುಧವಾರ, ರಾಜ್ಯದ ಮಾಲ್ಡಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಲ್ಲಿ ಮಾದಕವಸ್ತು ಕಳ್ಳಸಾಗಣೆ ಪ್ರಯತ್ನವನ್ನು ತಡೆಯಲು ಬಿಎಸ್ಎಫ್ ಸಿಬ್ಬಂದಿ ಗುಂಡು ಹಾರಿಸಿದಾಗ, ಬಾಂಗ್ಲಾದೇಶದ ಪ್ರಜೆಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement