ಚೆನ್ನೈ: ಈ ಬಾರಿಯ ತಮಿಳು ನಾಡು ವಿಧಾನಸಭೆ ಚುನಾವಣೆಯಲ್ಲಿ ಡಿಎಂಕೆ ಮೈತ್ರಿಕೂಟಕ್ಕೆ ಅತಿ ಹೆಚ್ಚಿನ ಮತಗಳನ್ನು ನೀಡಿ ಗೆಲ್ಲಿಸಿದ್ದಕ್ಕಾಗಿ ನಾನು ತಮಿಳು ನಾಡಿನ ಜನತೆಗೆ ಧನ್ಯವಾದಗಳನ್ನು ತಿಳಿಸುತ್ತೇನೆ, ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ನಿರ್ದಿಷ್ಟ ಭರವಸೆಗಳನ್ನು ಹಂತಹಂತವಾಗಿ ಈಡೇರಿಸುತ್ತೇವೆ ಎಂದು ಡಿಎಂಕೆ ನಾಯಕ ತಮಿಳು ನಾಡಿನ ಮುಂದಿನ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಹೇಳಿದ್ದಾರೆ.
ನಿನ್ನೆ ಫಲಿತಾಂಶ ಹೊರಬಿದ್ದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಹಾಗೂ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ದಿನವನ್ನು ನಾಳೆ(ಅಂದರೆ ಇಂದು ಮೇ3ಕ್ಕೆ) ಅಥವಾ ನಾಡಿದ್ದು ಪ್ರಕಟಿಸುವುದಾಗಿ ತಿಳಿಸಿದರು.
ಚುನಾವಣೆಯಲ್ಲಿ ಗೆದ್ದ ನಮಗೆ ಅಭಿನಂದನೆ ಸಲ್ಲಿಸುತ್ತಿರುವ ಎಲ್ಲಾ ನಾಯಕರಿಗೆ ನಾನು ಧನ್ಯವಾದಗಳನ್ನು ಹೇಳುತ್ತೇನೆ. ರಾಜಕೀಯ ಹಿರಿಯ ನಾಯಕರ ಸಲಹೆ, ಸಹಕಾರವನ್ನು ಈ ಸಂದರ್ಭದಲ್ಲಿ ಕೋರುತ್ತೇನೆ. ನಾಳೆಯ ನಂತರ ಪಕ್ಷದ ನೂತನ ಶಾಸಕರ ಸಭೆ ಕರೆದು ಅಧ್ಯಕ್ಷರನ್ನು ಔಪಚಾರಿಕವಾಗಿ ಆರಿಸುತ್ತೇವೆ ಎಂದು ಹೇಳಿದರು.
Advertisement